ADVERTISEMENT

ಬರೆದಂತೆ ಬದುಕಿದ ಶರಣರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 12:35 IST
Last Updated 24 ಜನವರಿ 2011, 12:35 IST

ಬನಹಟ್ಟಿ: ‘ಅರಿವಿನ ಅಂತರಂಗದ ಪರಿಶುದ್ಧ ಭಾವನೆಗಳಿಗೆ ಅಕ್ಷರ ರೂಪ ನೀಡಿ, ವಚನ ರಚಿಸಿದ ವೀರಶೈವ ಶರಣರು ಅಪ್ಪಟ ಕನ್ನಡಾಭಿಮಾನಿಗಳು. ಅವರ ಅನುಭಾವ ಕಾವ್ಯವಲ್ಲ. ಬದುಕಿನ ಸತ್ಯವನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆದರು, ಬರೆದಂತೆ ಬದುಕಿದರು’ ಎಂದು ಹುನ್ನೂರು-ಮಧುರಖಂಡಿಯ ಬಸವ ಜ್ಞಾನಗುರುಕುಲದ ಶರಣ ಈಶ್ವರ ಮಂಟೂರ ಹೇಳಿದರು.

ಭಾನುವಾರ ಇಲ್ಲಿನ ವಿಠ್ಠಲ ಮಂದಿರದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ   ನೀಡಿದ ‘ಹುಲಗಬಾಳಿ ಶರಣಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ರಬಕವಿ ವಿರಕ್ತಮಠದ  ಶ್ರೀ  ಸಿದ್ಧರಾಮ ಸ್ವಾಮಿಜಿ ಸಾನ್ನಿಧ್ಯ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಎಸ್ ಜಿ ಕೋಟಿ ಅಧ್ಯಕ್ಷತೆ ವಹಿಸಿದ್ದರು. ‘ಕನ್ನಡದಲ್ಲಿ ವಚನ ಪರಂಪರೆ’ ಕುರಿತು ದತ್ತಿ ಉಪನ್ಯಾಸ ನೀಡಿದ ಹಾರೂಗೇರಿಯ ಕನ್ನಡ ಪ್ರಾಧ್ಯಾಪಕ ಡಾ.ವಿ ಎಸ್ ಮಾಳಿ, ‘ವಿಶ್ವ ಸಾಹಿತ್ಯದಲ್ಲಿ ವಚನ ಪ್ರಕಾರ ವಿನೂತನವಾಗಿದ್ದು, 12 ಶತಮಾನದಿಂದ ಈವರೆಗೆ ವಚನ ಸಾಹಿತ್ಯ ತನ್ನ ವಿಶಿಷ್ಟತೆ ಉಳಿಸಿಕೊಂಡಿದೆ. ಇದು ಯಾವುದೇ ಸಾಹಿತ್ಯ ಪ್ರಕಾರದಲ್ಲಿ ಕಾಣಸಿಗದು’ ಎಂದರು.

ಉಪನ್ಯಾಸಕ ಕವಿ, ಜಿ.ಎಸ್.ವಡಗಾವಿ ಮಾತನಾಡಿ, ‘ಸ್ಥಾಪಿತ ಕಾವ್ಯ ರಚನಾ ಬಂಧದಿಂದ ಮುಕ್ತಗೊಳಿಸಲ್ಪಟ್ಟ ವಚನ ಪ್ರಕಾರ ವಿದ್ವಾಂಸರ ವಿಶ್ಲೇಷನೆಗಳಿಗೆ ಅತೀತವಾದದು’ ಎಂದರು. ಅ.ಭಾ. ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಸಿ. ಗೊಂದಿ, ಸಾಹಿತಿಗಳಾದ ಡಾ. ಡಿ ಎ ಬಾಗಲಕೋಟ, ಡಾ. ಸಂಗಮೇಶ ಬಿರಾದಾರ, ಅರ್ಜಿನ ಕೋರಟಕರ, ಬಸವರಾಜ ಯಡಹಳ್ಳಿ, ಆರ್ ಎಸ್ ಅಕ್ಕಿ, ಮಗಯ್ಯಸ್ವಾಮಿ ತೆಳಗಿನಮನಿ, ಮ.ಕೃ. ಮೇಗಾಡಿ, ಎಸ್. ಆರ್. ರಾವಳ, ಸಿದ್ದಪ್ಪ ಮನ್ನಿಕೇರಿ, ಎಂ.ಎಸ್. ಬದಾಮಿ, ಶಿವಯೋಗಿ ಬಿದರಿ, ಡಾ.ಟಿ.ಪಿ. ಬಾಂಗಿ ಹಾಜರಿದ್ದರು.

ಮಕ್ಕಳ ಸಾಹಿತಿ ಜಯವಂತ ಕಾಡದೇವರ ಸ್ವಾಗತಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಧುಕೇಶ್ವರ ಬೆಳಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಶಾಂತ ಶೆಟ್ಟಿ ಸಂದೇಶ ವಾಚಿಸಿದರು. ಕಿರಣ ಆಳಗಿ ವಂದಿಸಿದರು. ಪ್ರೊ.ಚಂದ್ರಪ್ರಭಾ ಬಾಗಲಕೋಟ ಮತ್ತು ಪ್ರೊ. ಮಾಧವಾನಂದ ಗುಟ್ಲಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.