ADVERTISEMENT

ಬಸ್ ಘಟಕಕ್ಕೆ ನಿವೇಶನ: ನಾಗರಿಕ ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:53 IST
Last Updated 7 ಸೆಪ್ಟೆಂಬರ್ 2013, 6:53 IST

ಹುನಗುಂದ: `ಬಹುದಿನಗಳ ಬೇಡಿಕೆಯ ಬಸ್ ಘಟಕ ಸ್ಥಾಪನೆಗೆ ಕೆಎಸ್‌ಆರ್‌ಟಿಸಿ ಮುಂದಾಗಿದೆ. ಪಟ್ಟಣ ಪಂಚಾಯ್ತಿ ಆಡಳಿತ ಕೂಡಲೇ ನಿವೇಶನ ಕೊಟ್ಟಲ್ಲಿ ಕಾರ್ಯ ಆರಂಭವಾಗುತ್ತದೆ. ತಕ್ಷಣ ಶಾಸಕರು ನಿವೇಶನ ಕೊಡಿಸಬೇಕು' ಎಂದು ನಾಗರಿಕ ಸೇವಾ ಸುಧಾರಣಾ ಸಮಿತಿ ಅಧ್ಯಕ್ಷ ವಿ.ಆರ್. ಜನಾದ್ರಿ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಬಿ. ಕಂಬಾಳಿಮಠ ಆಗ್ರಹಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ, ಸಾರಿಗೆ ಸಮಸ್ಯೆ, ನಿಲ್ದಾಣ ಕಟ್ಟಡ ಹಾಗೂ ಮೂಲ ಸೌಲಭ್ಯ ಪರಿಶೀಲನೆ ಸಂಬಂಧ ಶಾಸಕರ ಸೂಚನೆಯಂತೆ ನಗರಕ್ಕೆ ಭೇಟಿ ನೀಡಿದ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಜಾಗದಲ್ಲಿ ಘಟಕ ನಿರ್ಮಿಸಬಹುದು. ಕೂಡಲೇ ಇಲಾಖೆಗೆ ನಿವೇಶನ ಕೊಡಿಸಬೇಕು ಎಂದು ನಾಗರಿಕ ವೇದಿಕೆಗೆ ಬರೆದ ಪತ್ರದಲ್ಲಿ ಕೋರಿದ್ದಾರೆ ಎಂದರು.

ಬಸ್ ಘಟಕ ಸ್ಥಾಪನೆಯಿಂದ ಜನರಿಗೆ ಸಾಕಷ್ಟು ಅನುಕೂಲವಾಗುವುದು. ನಿವೇಶನ ಕೊಡಿಸುವಲ್ಲಿ ಕೆಲವರು ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ. ಈ ಕ್ರಮ ತರವಲ್ಲ. ಬಹು ದಿನದ ಕನಸು ನನಸಾಗುತ್ತಿದೆ. ನನೆಗುದಿಗೆ ಬಿದ್ದ ಈ ಕಾರ್ಯಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ತಕ್ಷಣ ಸ್ಪಂದಿಸಬೇಕು. ಈ ಬಗ್ಗೆ ಸಾರ್ವಜನಿಕರು ಶಾಸಕರಿಗೆ ಪತ್ರ ಚಳವಳಿ ಮೂಲಕ ಒತ್ತಾಯಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.