ADVERTISEMENT

ಬಾಗಲಕೋಟೆ: ಗಣೇಶೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 6:10 IST
Last Updated 3 ಸೆಪ್ಟೆಂಬರ್ 2011, 6:10 IST

ಬಾಗಲಕೋಟೆ:  ನಗರದಲ್ಲಿ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗುರುವಾರ ಬೆಳಿಗ್ಗೆ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಿರುವ ಭಕ್ತರು ಗಣಪನಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು.

ಹಳೆ ಬಾಗಲಕೋಟೆ, ವಿದ್ಯಾಗಿರಿ ಮತ್ತು ನವನಗರ ಸೇರಿದಂತೆ 100 ಸಾರ್ವಜನಿಕ ಗಣಪತಿಗಳನ್ನು ವಿವಿಧ ಸಂಘ-ಸಂಸ್ಥೆಗಳು, ಯುವಕ ಮಂಡಳಗಳು ಪ್ರತಿಷ್ಠಾಪಿಸಿದ್ದು, ಬುಧವಾರವೇ ಕೆಲವು ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಯುವಕರು ಮತ್ತು ಮಕ್ಕಳು ಬಣ್ಣ-ಬಣ್ಣದ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ನಗರಸಭೆ ವತಿಯಿಂದ ನಗರದ ನಾಲ್ಕು ಕಡೆ ಗಣಪತಿ ವಿಸರ್ಜನೆಗೆ ಬೃಹತ್ ಟ್ಯಾಂಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸೂಕ್ತ ಭದ್ರತೆ ಕೈಗೊಂಡಿದ್ದಾರೆ. ಶಾಂತಿ ಸುವ್ಯವಸ್ಥೆ ಉದ್ದೇಶದಿಂದ ಮಧ್ಯಪಾನ ನಿಷೇಧಿಸಿದ್ದರೂ ಕೂಡ ಗುರುವಾರ ಗಣಪತಿಯನ್ನು ಮೆರವಣಿಗೆಯಲ್ಲಿ ಪ್ರತಿಷ್ಠಾಪನೆಗೆ ಕೊಂಡೊಯ್ಯವ ಸಂದರ್ಭದಲ್ಲಿ ಕೆಲ ಯುವಕರು ಕುಡಿದು ನರ್ತಿಸುತ್ತಿದ್ದ ಘಟನೆ ನಡೆದಿದೆ. ಆದರೆ ಈ ಬಗ್ಗೆ ಯಾವುದೇ ಪ್ರಕಟಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.