ಬಾದಾಮಿ: ಕೆ.ಎಸ್. ನಾರಾಯಣಾಚಾರ್ಯ ಬರೆದ ವಾಲ್ಮೀಕಿ ಯಾರು? ಎಂಬ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು, ಕೃತಿ ರಚನೆಕಾರನನ್ನು ಬಂಧಿಸಿ ಗಡಿಪಾರು ಮಾಬೇಕು ಎಂದು ಆಗ್ರಹಿಸಿ ವಾಲ್ಮೀಕಿ ಸಮಾಜ ಮತ್ತು ಇತರ ಪ್ರಗತಿಪರ ಸಂಘಟನೆಗಳು ಬಾದಾಮಿ ಬಂದ್ ಮೂಲಕ ಪ್ರತಿಭಟನೆ ನಡೆಸಿದವು.
ನಗರದ ಅಂಬೇಡ್ಕರ್ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಹೊರಟ ಪ್ರತಿಭಟನಾ ಮೆರವಣಿಗೆ ನಾರಾಯಣಾಚಾರ್ಯ ವಿರುದ್ಧ ಘೋಷಣೆ ಕೂಗುತ್ತ ಪ್ರತಿಕೃತಿಯನ್ನು ದಹನ ಮಾಡಿದರು. ವೀರಪುಲಿಕೇಶಿ ವೃತ್ತ, ಟಾಂಗಾ ನಿಲ್ದಾಣ ಮತ್ತು ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಮಾಡಲಾಗಿತ್ತು. ಸಾರಿಗೆ ಸಂಪರ್ಕ ಕೆಲಗಂಟೆಗಳ ಕಾಲ ಸ್ಥಗಿತವಾಗಿತ್ತು. ಪ್ರಯಾಣಿಕರು ಮತ್ತು ಪರೀಕ್ಷೆಗೆ ಬಂದ ಕಾಲೇಜು ವಿದ್ಯಾರ್ಥಿಗಳು ಊರಿಗೆ ತೆರಳಲು ಪರದಾಡಬೇಕಾಯಿತು.
ನಂತರ ಜರುಗಿದ ಸಮಾರಂಭದಲ್ಲಿ ಲಕ್ಷ್ಮಣ ಮರಡಿತೋಟ, ಪ್ರಕಾಶ ನಾಯ್ಕರ್, ಕೃತಿ ರಚನೆಕಾರರು ವಾಲ್ಮೀಕಿ ಮಹರ್ಷಿ ಬೇಡ ಜನಾಂಗದವ ಅಲ್ಲ. ಬ್ರಾಹ್ಮಣ ಜನಾಂಗದಲ್ಲಿ ಜನಿಸಿದ್ದಾನೆ ಎಂದು ತಿರುಚಿ ಬರೆದು ವಾಲ್ಮೀಕಿ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಸರ್ಕಾರ ಕೂಡಲೇ ನಾರಾಯಣಾಚಾರ್ಯ ಅವರನ್ನು ಬಂಧಿಸಿ, ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಬಸವರಾಜ ತಳವಾರ, ಉಮೇಶ ಹಕ್ಕಿ, ಆರ್.ಡಿ. ದಳವಾಯಿ, ರಂಗನಗೌಡ ಗೌಡರ, ಎಸ್.ಎಸ್. ಮಾಧವನವರ, ಪರಸಪ್ಪ ನಾಯ್ಕರ್, ಕನಕಪ್ಪ ಪರಸನ್ನವರ, ಕೋಣಪ್ಪ ಕಾಟನ್ನವರ, ಶಿವಾನಂದ ನಾಯ್ಕರ್, ಮಾಗುಂಡಪ್ಪ ದಂಡಿನ, ಪರಸಪ್ಪ ಚೂರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.