ADVERTISEMENT

‘ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ’

ಗೋವನಕೊಪ್ಪ: ಮೌನಾನುಷ್ಠಾನ ಮಂಗಲೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 11:51 IST
Last Updated 17 ಜೂನ್ 2018, 11:51 IST

ಕುಳಗೇರಿ ಕ್ರಾಸ್ (ಬಾಗಲಕೋಟೆ): ಬಾದಾಮಿ ತಾಲ್ಲೂಕು ಗೋವನಕೊಪ್ಪ ಗ್ರಾಮದಲ್ಲಿ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡಿದ್ದ ಮೌನಲಿಂಗಾನುಷ್ಠಾನ ಮಂಗಲೋತ್ಸವ ಕಾರ್ಯಕ್ರಮ ಗುರುವಾರ ಜರುಗಿತು.

ಬ್ರಹ್ಮಾನಂದ ಶ್ರೀಗಳ ಮಠದಲ್ಲಿ ಅಧಿಕಮಾಸದ ಅಂಗವಾಗಿ ಬೈರನಹಟ್ಟಿಯ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಒಂದು ತಿಂಗಳ ಕಾಲ ಮೌನಾನುಷ್ಠಾನ ಕೈಗೊಂಡಿದ್ದರು. ಗದುಗಿನ ತೋಂಟದಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಶಾಂತಲಿಂಗ ಶ್ರೀಗಳಿಗೆ ‘ಓಂ ಬಸವಲಿಂಗಾಯ ನಮಃ’ ಎಂಬ ಮಂತ್ರದ ಉಪದೇಶ ಪಡೆದು ಮೌನಲಿಂಗಾನುಷ್ಠಾನ ಯಶಸ್ವಿಯಾಗಿ ಪೂರೈಸಿದ್ದರು. ಹಾಗಾಗಿ ಮಂಗಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಡಾ. ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಮಕ್ಕಳಲ್ಲಿ ಒಳ್ಳೆಯ ಸಂಸ್ಕ್ರತಿ ಬೆಳಸಿ ಹಾಗೂ ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿ, ಕೆಟ್ಟ ಚಟಗಳನ್ನು ಮಾಡದಂತೆ ಹಾಗೂ ಕೆಟ್ಟ ಶಬ್ಧಗಳ ಬಳಸಲೂ ಅವಕಾಶ ನೀಡದಿರಿ, ಅವರನ್ನು ಸಮಾಜದಲ್ಲಿ ಮಾದರಿಯಾಗುವಂತ ವ್ಯಕ್ತಿತ್ವ ಮಕ್ಕಳಲ್ಲಿ ರೂಪಿಸಿರಿ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಧಾರವಾಡದ ಎಸ್‌ಡಿಎಂಸಿ ಕಾಲೇಜಿನ ನಿರ್ದೇಶಕ ಡಾ. ನಿರಂಜನಕುಮಾರ, ಇಂದಿನ ಮಕ್ಕಳಲ್ಲಿ ಧರ್ಮ,ದೇವರ ಬಗ್ಗೆ ಭಕ್ತಿಮೂಡಿಸಬೇಕು ಎಂದು ಸಲಹೆ ನೀಡಿದರು.

ಡಾ.ಜಿನದತ್ತ ಹಡಗಲಿ ಮಾತನಾಡಿ, ‘ಮಕ್ಕಳು ಸುಸಂಸ್ಕೃರಾಗಲು ಮೊದಲು ಒಳ್ಳೆಯ ಪರಿಸರ ರೂಪಿಸಬೇಕು. ಉತ್ತಮ ಗುರುಗಳು ಇದ್ದರೆ ಅವರಿಗೆ ಉತ್ತಮ ಅಡಿಪಾಯ ದೊರೆತು ಜೀವನವೂ ಸಾರ್ಥಕವಾಗುತ್ತದೆ. ಜೀವನದಲ್ಲಿ ಹಣ ಇದ್ದರೆ ಸಾಲದು. ಆಧ್ಯಾತ್ಮಿಕ ಜೀವನದಲ್ಲಿ ಬದುಕು ಕಳೆದರೆ ವ್ಯಕ್ತಿತ್ವವೇ ಬದಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮರುಳಸಿದ್ಧ ಶಿವಾಚಾರ್ಯರು, ಶಿವುಕುಮಾರ ಸ್ವಾಮೀಜಿ, ಶಿವಮೂರ್ತಿ ಮಹಾಸ್ವಾಮಿಗಳು, ಸಿದ್ಧಲಿಂಗ ಶಿವಾಚಾರ್ಯರು, ಗುರುಸಿದ್ಧವೀರ ಶಿವಯೋಗಿಗಳು, ಸಿದ್ಧಲಿಂಗ ಶಿವಾಚಾರ್ಯರು, ಮಂಜುನಾಥ ಸ್ವಾಮೀಜಿ, ಶಿವಯೋಗಿ ದೇವರು, ವೀರೇಶ್ವರ ದೇವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.