ADVERTISEMENT

ಮಗಳ ಆತಿಥ್ಯ: ಮೊಮ್ಮಕ್ಕಳೊಂದಿಗೆ ಹರಟೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2013, 11:01 IST
Last Updated 13 ಫೆಬ್ರುವರಿ 2013, 11:01 IST
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೋ. ಚೆನ್ನಬಸಪ್ಪ ಅವರನ್ನು ಮಂಗಳವಾರ ಬಾಗಲಕೋಟೆಯಲ್ಲಿ ಕಸಾಪ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಗೌರವ ಕಾರ್ಯದರ್ಶಿ ಪ್ರೊ. ಅಬ್ಬಾಸ್ ಮೇಲಿನಮನಿ, ಜಿ.ಕೆ.ತಳವಾರ, ಎಸ್.ಜಿ.ಕರೂರ, ಬಿ.ಕೆ.ಹಿರೇಮಠ, ಬಸವಪ್ರಭು ಸರನಾಡಗೌಡ ಹಾಜರಿದ್ದರು
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೋ. ಚೆನ್ನಬಸಪ್ಪ ಅವರನ್ನು ಮಂಗಳವಾರ ಬಾಗಲಕೋಟೆಯಲ್ಲಿ ಕಸಾಪ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಗೌರವ ಕಾರ್ಯದರ್ಶಿ ಪ್ರೊ. ಅಬ್ಬಾಸ್ ಮೇಲಿನಮನಿ, ಜಿ.ಕೆ.ತಳವಾರ, ಎಸ್.ಜಿ.ಕರೂರ, ಬಿ.ಕೆ.ಹಿರೇಮಠ, ಬಸವಪ್ರಭು ಸರನಾಡಗೌಡ ಹಾಜರಿದ್ದರು   

ಬಾಗಲಕೋಟೆ: ವಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನದ ಸರ್ವಾಧ್ಯಕ್ಷ ಕೋ.ಚೆನ್ನಬಸಪ್ಪ ಬೆಂಗಳೂರಿಗೆ ಮರಳುವ ಮುನ್ನ ಮಂಗಳವಾರ ಇಲ್ಲಿ ಮಗಳ ಮನೆಗೆ ಬಂದು, ಆತಿಥ್ಯ ಸ್ವೀಕರಿಸಿದರು. ಕೆಲ ಹೊತ್ತು ಮೊಮ್ಮಕ್ಕಳೊಂದಿಗೆ ಹರಟೆ ಹೊಡೆದು ಸಂತೋಷಪಟ್ಟರು.

ಚೆನ್ನಬಸಪ್ಪ ಅವರು ನಗರಕ್ಕೆ ಬಂದಿರುವ ವಿಷಯ ತಿಳಿದ ಅವರ ಅಭಿಮಾನಿಗಳು, ಸಾಹಿತ್ಯಾಸಕ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

`ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ಶಿಕ್ಷೆ ನೀಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅನಗತ್ಯವಾಗಿ ಪೋಷಕರು ಶಿಕ್ಷಕರ ವಿರುದ್ಧ ದೂರು ನೀಡುವುದು, ಹೊಡೆಯುವುದು ನಡೆಯುತ್ತಿದೆ. ಮಾಧ್ಯಮಗಳು ಇದಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ವಿಷಾದದ ಸಂಗತಿ. ಸಣ್ಣ-ಪುಟ್ಟ ಶಿಕ್ಷೆ ಇಲ್ಲದೇ ಶಿಕ್ಷಣ ನೀಡಿ ಎನ್ನುವುದು ತಪ್ಪು' ಎಂದು ಕೋ.ಚೆ. ಅಭಿಪ್ರಾಯಪಟ್ಟರು.

`ಪ್ರತಿನಿತ್ಯದ ಮಾತುಗಳಲ್ಲಿ ಮಕ್ಕಳು ಕನ್ನಡವನ್ನು ಹೆಚ್ಚು ಬಳಸುವಂತೆ ಪೋಷಕರು ಗಮನಹರಿಸಬೇಕು. ಎಲ್ಲದಕ್ಕೂ ಇಂಗ್ಲಿಷ್ ಪದಗಳ ಮೊರೆ ಹೋಗಬಾರದು. ಆಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ' ಎಂದು ಹೇಳಿದರು.

ಸಮ್ಮೇಳನ ಯಶಸ್ವಿ: `ವಿಜಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ಕನ್ನಡಿಗರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದರು' ಎಂದು ಶ್ಲಾಘಿಸಿದರು.

`ಊಟ, ವಸತಿ ವಿಷಯದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿದೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಲಕ್ಷಾಂತರ ಜನ ಸೇರಿದಲ್ಲಿ ವ್ಯತ್ಯಾಸ ಸಹಜ' ಎಂದು ಹೇಳಿದರು.

ಆಹ್ವಾನ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಗೌರವ ಕಾರ್ಯದರ್ಶಿ ಪ್ರೊ. ಅಬ್ಬಾಸ್ ಮೇಲಿನಮನಿ, ಕಸಾಪ ಬಾಗಲಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಕೆ.ತಳವಾರ ಅವರು ಕೋ.ಚೆ. ಅವರನ್ನು ಸನ್ಮಾನಿಸಿ, ಮಾರ್ಚ್‌ನಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ಆಹ್ವಾನ ನೀಡಿದರು. ತಮ್ಮ ಆಗಮನದಿಂದ ಕಾರ್ಯಕ್ರಮಕ್ಕೆ ವಿಶೇಷ ಕಳೆ ಕಟ್ಟುವುದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಪಿ.ನಾಡಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಸಾಹಿತಿ ಬಾಳಾ ಸಾಹೇಬ ಲೋಕಾಪುರ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಅನ್ನದಾನಿ ಹಿರೇಮಠ, ಎಸ್.ಜಿ. ಕೋಟಿ, ಬಿವಿವಿ ಸಂಘದ ಆಡಳಿತಾಧಿಕಾರಿ ಎಸ್.ಜಿ. ಕರೂರ, ಬಿ.ಕೆ. ಹಿರೇಮಠ, ಎಂ.ಬಿ.ಹೊಕ್ರಾಣಿ, ಎಸ್.ಬಿ. ಗೊಳಪ್ಪನವರ, ತಿಪ್ಪಣ್ಣ ಯಳ್ಳಿಗುತ್ತಿ ಹಾಗೂ ಕೋ.ಚೆ. ಅವರ ಮಗಳು ಪುಣ್ಯವತಿ, ಅಳಿಯ ಕೆ.ಎಂ.ಗುದಗಿ ಮತ್ತು ಕುಟುಂಬದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.