ADVERTISEMENT

ಮಡೆಸ್ನಾನ ಪದ್ಧತಿ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:15 IST
Last Updated 12 ಡಿಸೆಂಬರ್ 2013, 8:15 IST

ಜಮಖಂಡಿ: ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಜೀತ ಪದ್ಧತಿ ಇತ್ಯಾದಿಗಳನ್ನು ಕಾನೂನಿನ ಮೂಲಕ ನಿಷೇಧಿಸಿದ ಮಾದರಿಯಲ್ಲಿ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸಬೇಕು ಎಂದು ಸ್ಥಳೀಯ ಜನಪರ ವಿಚಾರ ವೇದಿಕೆಯ ಸದಸ್ಯರು ಆಗ್ರಹಿಸಿದ್ದಾರೆ.

ಮಹಿಳೆಯರ ಮೇಲೆ ನೀರು ಎರಚುವ ಪದ್ಧತಿ, ಮಲ ಹೊರುವ ಪದ್ಧತಿ, ದೇವದಾಸಿ ಪದ್ಧತಿ ಕೆಳವರ್ಗದ ಜನತೆಯನ್ನು ಅವಮಾನಿಸುವ ಪದ್ಧತಿಗಳು ಎನಿಸಿವೆ. ಹಾಗೆಯೇ ಮಡೆಸ್ನಾನ ಪದ್ಧತಿ ಕೂಡ ಕೆಳವರ್ಗದ ಜನರನ್ನು ಅವಮಾನಿಸುವ ಪದ್ಧತಿಯಾಗಿದೆ. ಇಂತಹ ಅನಿಷ್ಟ ಪದ್ಧತಿಗಳ ಆಚರಣೆಯ ಹಿಂದೆ ಪುರೋಹಿತಶಾಹಿಗಳ ಕುತಂತ್ರ ಅಡಗಿದೆ.

ಆಶಿಕ್ಷಿತ ಹಾಗೂ ಸಾಮಾಜಿಕವಾಗಿ ಹಿಂದುಳಿದ ಅಮಾಯಕ ಜನರ ಮೂಢನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಸಂವಿ­ಧಾನಿಕ ಕ್ರಮವೆನಿಸುತ್ತದೆ. ಪ್ರಜಾ­ಸತ್ತಾತ್ಮಕ ವ್ಯವಸ್ಥೆಗೆ ಮಾಡಿದ ಘೋರ ಅನ್ಯಾಯ ಎನಿಸುತ್ತದೆ. ಇದು ಕೇವಲ ನಂಬಿಕೆ ಮತ್ತು ವಿಶ್ವಾಸದ ವಿಷಯ ಮಾತ್ರವಲ್ಲ.

ಬದಲಾಗಿ ದಲಿತರ ಆತ್ಮ ಗೌರವ ಕುಗ್ಗಿಸುವ ಷಡ್ಯಂತ್ರವಾಗಿದೆ. ಇಂತಹ ಅಸಂವಿಧಾನಿಕ ಪದ್ಧತಿಯನ್ನು ಕಾನೂನಿನ ಮೂಲಕ ನಿಷೇಧಿಸಬೇಕು ಎಂದು ವೇದಿಕೆಯ ಸದಸ್ಯರಾದ ರವಿ ಬಬಲೇಶ್ವರ, ಪರಶುರಾಮ ಕಾಂಬಳೆ, ಮಹಾಲಿಂಗಪ್ಪ ಆಲಬಾಳ, ಸುರೇಶ ಮೀಶಿ, ವೀರೇಶ ರಾಮೋಶಿ, ಹನಮಂತ ಕಾಂಬಳೆ, ಅಪ್ಪು ಪೋತರಾಜ, ಅಮೀತ ಕಾಂಬಳೆ, ಯಾಸೀನ್‌ ಲೋದಿ, ವಕೀಲ ರಾಮಣ್ಣ ಕೊಣ್ಣೂರ, ಆರೀಫ್ ಪೆಂಡಾರಿ ಆಗ್ರಹಿಸಿದ್ದಾರೆ.

ಡಿಎಸ್ಎಸ್ ಖಂಡನೆ
ಜಮಖಂಡಿ:
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೆಯ ಆರಂಭದ ದಿನದಂದು ನಡೆದ ಮಡೆಸ್ನಾನ ಘಟನೆಯನ್ನು ರಾಜ್ಯ ದಲಿತ ಸಂಘರ್ಷ ಸಮಿತಿಯ (ನಾಗವಾರಬಣ) ತಾಲ್ಲೂಕು ಶಾಖೆ ಖಂಡಿಸುತ್ತದೆ ಎಂದು ಸಂಚಾಲಕ ಮುತ್ತಣ್ಣ ಮೇತ್ರಿ ತಿಳಿಸಿದ್ದಾರೆ.
ಸುಮಾರು ಎರಡು ವರ್ಷಗಳಿಂದ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸು­ವಂತೆ ಒತ್ತಾಯಿಸಿ ಬುದ್ಧಿ ಜೀವಿಗಳು ಹಾಗೂ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗರವಾರಬಣ) ಕಾರ್ಯಕರ್ತರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ಆದರೆ ಮಡೆಸ್ನಾನ ಮಾತ್ರ ನಿಂತಿಲ್ಲ.

ಒಂದು ವರ್ಗದ ಜನತೆ ಉಂಡು ಬಿಟ್ಟ ಎಂಜಲ ಎಲೆಯ ಮೇಲೆ ಇನ್ನೊಂದು ವರ್ಗದ ಜನತೆ ಉರುಳಾಡುವ ಅನಿಷ್ಟ ಪದ್ಧತಿಯನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು. ಈ ಅನಿಷ್ಟ ಪದ್ಧತಿ ನಿಷೇಧಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.