ADVERTISEMENT

ಮರಳಿ ಮಠ ತಲುಪಿದ ಮಹಾಲಿಂಗಪುರ ಮರುತೇರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:44 IST
Last Updated 23 ಸೆಪ್ಟೆಂಬರ್ 2013, 9:44 IST

ಮಹಾಲಿಂಗಪುರ: ಎರಡು ದಿನಗಳವರೆಗೆ ಸುರಿಯುತ್ತಿದ್ದ ಮಳೆಯಲ್ಲೂ ಭಕ್ತಿಯ ಪರಾಕಾಷ್ಠೆ ತಲುಪಿದ್ದ ಭಕ್ತಾದಿಗಳು ಮೂರನೆಯ ದಿನ ಚನ್ನಗಿರೀಶ್ವರ ಪಾದಗಟ್ಟೆಯಿಂದ ರಥವನ್ನು ಸುರಕ್ಷಿತವಾಗಿ ಹಾಗೂ ಸಂಭ್ರಮಗಳೊಂದಿಗೆ ಶ್ರೀಮಠದ ವರೆಗೆ ತಲುಪಿಸಿ ಕೃತಾರ್ಥ ಭಾವ ಹೊಂದಿದರು. ಶುಕ್ರವಾರ ಸಂಜೆ ಪ್ರಯಾಣ ಬೆಳೆಸಿದ್ದ ಮರುತೇರು ಶನಿವಾರ ಬೆಳಗಿನ 7.30ಕ್ಕೆ ತನ್ನ ಮೂಲ ಸ್ಥಾನ ತಲುಪಿದಾಗ ನೆರೆದಿದ್ದ ಸಾವಿರಾರು ಭಕ್ತಾದಿಗಳು ಹರ್ಷೋದ್ಘಾರದಿಂದ ಜಯಕಾರ ಹಾಕಿದರು.

ಎರಡು ದಿನಗಳವರೆಗೆ ರಥದ ಮುಂದೆ ಇಲ್ಲಿಯ ಪ್ರಖ್ಯಾತ ಕರಡಿ ಮಜಲಿನ ತಂಡ ಆಯ ಕಟ್ಟಿನ ಜಾಗೆಗಳಲ್ಲಿ ನಡೆಸಿದ ಪ್ರದರ್ಶನ ಭಕ್ತಾದಿಗಳ ಮೈ ಮನ ತಣಿಸುವಲ್ಲಿ ಯಶಸ್ವಿಯಾಯಿತು. ಸುಂದರವಾಗಿ ಅಲಂಕೃತಗೊಂಡ ತೇರು, ಅದರೊಡನೆ ಮುಂದೆ ಮುಂದೆ ಸಾಗುತ್ತಿದ್ದ ಉಚ್ಛಯ್ಯ, ನಂದಿಕೋಲು ಹಾಗೂ ಕಂಡ್ಯಾಳ ಮೇಳಗಳು ಜಾತ್ರೆಯ ವೈಭೋಗವನ್ನು ಹೆಚ್ಚಿಸಿದ್ದವು.

ಒಂದು ದಿನ ಜಟಾಭಿಷೇಕ, ಎರಡು ದಿನ ರಥೋತ್ಸವ ನಡೆಯುವುದಲ್ಲದೇ ಜಾತ್ರೆಯ ನಿಮಿತ್ತ ಇಲ್ಲಿ ಹಾಕಿದ ಅಂಗಡಿ ಮುಂಗಟ್ಟು ತಿಂಗಳವರೆಗೂ ಮುಂದುವರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.