ಬಾಗಲಕೋಟೆ: ‘ಮಲೇರಿಯಾ ಮುಕ್ತ ವಾತಾವರಣಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳಿದರು.
ಮಲೇರಿಯಾ ವಿರೋಧಿ ಮಾಸಾಚರಣೆ ನಿಮಿತ್ತ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಲೇರಿಯಾ, ಆನೆಕಾಲು, ಡೆಂಗಿ ಹಾಗೂ ಚಿಕುನ್ಗುನ್ಯಾದಂತಹ ರೋಗಗಳ ಮೂಲ ಸೊಳ್ಳೆಯಾಗಿದೆ. ಅದನ್ನು ನಿರ್ಮೂಲನೆ ಮಾಡುವ ಮೂಲಕ ರೋಗ ಹರಡದಂತೆ ಜಾಗೃತಿ ವಹಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ಮಾತನಾಡಿ, ‘ಗ್ರಾಮೀಣ ಪ್ರದೇಶ ಹಾಗೂ ಕ್ವಾರಿಗಳಿರುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಮಳೆಗಾಲ ಆರಂಭವಾಗಿದೆ. ಮಲೇರಿಯಾ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು’ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ಎನ್. ದೇಸಾಯಿ ಮಾತನಾಡಿ, ‘ ಸಾರ್ವಜನಿಕರಲ್ಲಿ ಜಾಗೃತಿಗಾಗಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ. ಮನೆಯಲ್ಲಿ ಸೊಳ್ಳೆ ಪರದೆ ಬಳಸುವುದು ಮುಖ್ಯ. ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದರು.
ನಗರದಲ್ಲಿ ವಿವಿಧೆಡೆ ಜಾಗೃತಿ ಜಾಥಾ..
ನಗರದ ವಿವಿಧೆಡೆ ಜಾಗೃತಿ ಜಾಥಾ ಸಂಚರಿಸಿತು. ಜಾಥಾದಲ್ಲಿ ಎಎನ್ಎಂ ತರಬೇತಿ ಕೇಂದ್ರ ಹಾಗೂ ಅರುಣೋದಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕರಪತ್ರ ಹಂಚಿ, ಘೋಷಣೆಗಳನ್ನು ಕೂಗಿದರು. ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ.ಜಯಶ್ರೀ ಎಮ್ಮಿ, ಡಾ.ದಿಲೀಪ್ ಗಂಜಿಹಾಳ, ಡಾ.ಪಟ್ಟಣಶೆಟ್ಟಿ, ಡಾ.ಹಿಟ್ನಳ್ಳಿ. ಡಾ.ಶ್ರೀಕಾಂತ ತೇಲಸಂಗ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.