ಲೋಕಾಪುರ: ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ವರುಣನ ಅರ್ಭಟದಲ್ಲಿ ಸುರಿದ ಮಳೆಗೆ ಮನೆ ಚಾವಣಿ ಕುಸಿದು ಹಲವಾರು ಮನೆಗಳಿಗೆ ನೀರು ನುಗ್ಗಿದ ಘಟನೆ ಜರುಗಿದೆ.
ಮಳೆಯ ನೀರು ಚರಂಡಿಯಲ್ಲಿ ಹರಿಯದೆ ಮನೆಗಳಿಗೆ ನುಗ್ಗಿ ಅನಾಹುತ ಸೃಷ್ಟಿಸಿತು.
ಜ್ಞಾನೇಶ್ವರ ಮಠದ ಹತ್ತಿರದ ಹೆಬ್ಬಾಳಪ್ಪಾ ಭಜಂತ್ರಿ ಅವರ ಮನೆಯ ಮೇಲ್ಛಾವಣಿ ಕುಸಿದಿದ್ದು ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ . ಮುಧೋಳ ರಸ್ತೆಯ ಜನತಾ ಫ್ಲಾಟ್ ನಿವಾಸಿಗಳಾದ ಪಾರ್ವತಿವ್ವಾ ಚೌಧರಿ ಮತ್ತು ರಂಗಪ್ಪ ಬರಗಿಯವರ ಮನೆಗೆ ನುಗ್ಗಿದ ಮಳೆ ನೀರು ಮತ್ತು ಚರಂಡಿ ನೀರನ್ನು ಮನೆಯಿಂದ ಹೊರ ಹಾಕಲು ಮನೆಯವರು ಹರಸಾಹಸ ಪಡಬೇಕಾಯಿತು.
ಚರಂಡಿಗಳನ್ನು ದುರಸ್ತಿಗೊಳಿಸದ ಕಾರಣ ಮಳೆಯ ನೀರು ಕೊಳಚೆ ಯೊಂದಿಗೆ ಸೇರಿ ತಗ್ಗು ಪ್ರದೇಶದ ಮನೆಗಳ ಒಳಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಗಿ ಪಾತ್ರೆಗಳಲ್ಲಿ ಕೊಳಚೆ ನೀರನ್ನು ತುಂಬಿ ಬೀದಿಗೆ ಎರಚಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.