ADVERTISEMENT

ರಕ್ಷಣೆಗೆ ಕಾದಿದೆ ಮುಧೋಳ ನಗರದ ಹಳೇ ಕೋರ್ಟ್ ಕಟ್ಟಡ

ಅಕ್ರಮ ಚಟುವಟಿಕೆಗೆ ತಾಣ; ಹಂದಿ,ನಾಯಿಗಳಿಗೆ ನೆಲೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 10:19 IST
Last Updated 15 ಜೂನ್ 2018, 10:19 IST
ಮುಧೋಳದ ಹಳೆ ಕೋರ್ಟ್ ಕಟ್ಟಡ ಸರ್ಕಾರದ ನಿರ್ಲಕ್ಷದಿಂದ ಹಾಳಾಗುತ್ತಿದೆ
ಮುಧೋಳದ ಹಳೆ ಕೋರ್ಟ್ ಕಟ್ಟಡ ಸರ್ಕಾರದ ನಿರ್ಲಕ್ಷದಿಂದ ಹಾಳಾಗುತ್ತಿದೆ   

ಮುಧೋಳ: ನಗರದ ಹಳೆಯ ನ್ಯಾಯಾಲಯ ಕಟ್ಟಡ ನಿರ್ವಹಣೆ ಕೊರತೆಯಿಂದ ಹಾಳು ಬಿದ್ದಿದೆ. ಅಕ್ರಮ ಚಟುವಟಿಕೆ ತಾಣವಾಗಿ ಹಂದಿ, ನಾಯಿಗಳ ಆವಾಸ ಸ್ಥಾನವಾಗಿ ಪರಿಣಮಿಸಿದ್ದು, ಎಲ್ಲೆಡೆ ಹೊಲಸು ತುಂಬಿದೆ.

ಈ ಹಿಂದೆ ಮುಧೋಳದ ಘೋರ್ಪಡೆ ಮಹಾರಾಜರ ಕಾಲದಿಂದ ಹಳೆಯ ಕಟ್ಟಡ ನ್ಯಾಯಾಲಯವಾಗಿ ಬಳಕೆಯಾಗುತ್ತಿತ್ತು. ನ್ಯಾಯಾ
ಧೀಶರು, ಕೋರ್ಟ್‌ ಸಿಬ್ಬಂದಿ, ವಕೀಲರು,ಕಕ್ಷಿದಾರರಿಂದ ತುಂಬಿರು ತ್ತಿತ್ತು. ಕೊಲೆ ಪ್ರಕರಣವೊಂದರ ವಿಚಾರಣೆ ವೇಳೆ ದೇಶದ ಹಿರಿಯ ವಕೀಲ ಫಾಲಿ ನಾರಿಮನ್ ಇದೇ ನ್ಯಾಯಾಲಯ ಕಟ್ಟಡಕ್ಕೆ ಬಂದು ವಾದ ಮಂಡಿಸಿದ್ದರು.

ಆದರೆ ಹಳೆಯ ಕಟ್ಟಡದಲ್ಲಿ ಸ್ಥಳಾವಕಾಶ ಕಡಿಮೆ ಎಂದು 2006 ರಲ್ಲಿ ರನ್ನ ಕ್ರೀಡಾಂಣದ ಹತ್ತಿರದ ವಿಜಯಪುರ–ಬೆಳಗಾವಿ ರಾಜ್ಯ ಹೆದ್ದಾರಿ ಪಕ್ಕದ ನೂತನ ಕಟ್ಟಡಕ್ಕೆ ನ್ಯಾಯಾಲಯ ಸ್ಥಳಾಂತರಿಸಲಾಗಿದೆ. ಆಗಿನಿಂದ ಹಳೆಯ ಕಟ್ಟಡಕ್ಕೆ ಗ್ರಹಣ ಬಡಿದಿದೆ.

ADVERTISEMENT

ಅದು ಹಾಳಾಗುವುದನ್ನು ಕಂಡು 2006ರಲ್ಲಿ ಶಾಸಕ ಗೋವಿಂದ ಕಾರಜೋಳ ಅಲ್ಲಿಗೆ ಸರ್ಕಾರಿ ಪದವಿಪೂರ್ವ ಕಾಲೇಜ್ ಮಂಜೂರು ಮಾಡಿಸಿದ್ದರು. 2014ರಲ್ಲಿ ಕಾಲೇಜು ಸ್ವಂತ ಕಟ್ಟಡದ ಭಾಗ್ಯ ಕಾಣುತ್ತಿದ್ದಂತೆಯೇ ಮತ್ತೆ ನ್ಯಾಯಾಲಯ ಕಟ್ಟಡ ಅನಾಥವಾಗಿದೆ.

ಮೊದಲು ಹಸಿರು ಗಿಡ–ಮರಗಳಿಂದ ಆವೃತವಾಗಿದ್ದ ಕಟ್ಟಡದ ಅವರಣ ಈಗ ಮೂತ್ರ ವಿಸರ್ಜನಾ ತಾಣವಾಗಿದೆ. ಕಟ್ಟಡಕ್ಕೆ ಬಾಗಿಲು ಇಲ್ಲದೇ ಆಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ನಗರಸಭೆಯವರು ಕಟ್ಟದೊಳಗಿನ ನಳ ಬಂದ್‌ ಮಾಡುವ ವ್ಯವಸ್ಥೆ ಮಾಡದೇ ನೀರು ಪೋಲಾಗುತ್ತಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಕಟ್ಟಡದ ರಕ್ಷಣೆಗೆ ಮುಂದಾಗಲಿ ಎಂಬುದು ನಗರದ ನಿವಾಸಿಗಳ ಆಗ್ರಹವಾಗಿದೆ.

ಸ್ವಾತಂತ್ರ್ಯಪೂರ್ವದಿಂದಲೂ ನ್ಯಾಯಾಲಯ ಆಗಿದ್ದ ಈ ಕಟ್ಟಡ ಇಂದು ಹಾಳು ಬಿದ್ದಿದೆ. ಸಂಬಂಧಿಸಿದವರು ಅದರ ಸದ್ಬಳಕೆಗೆ ಮುಂದಾಗಲಿ - ಬಿ.ಎಚ್.ಪಂಚಗಾಂವಿ, ಹಿರಿಯ ವಕೀಲ

–ಉದಯ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.