ಬಾಗಲಕೋಟೆ: ‘ದೇಶದಲ್ಲಿರುವ ಬಡತನ, ಅನಕ್ಷರತೆ ಹಾಗೂ ಭ್ರಷ್ಟಾಚಾರ ತೊಡೆದು ಹಾಕಲು ಪ್ರತಿಯೊಬ್ಬರು ಸಂಕಲ್ಪ ತೊಡಬೇಕು’ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ನವಭಾರತ ಮಂಥನ ಸಂಕಲ್ಪದಿಂದ ಸಿದ್ಧಿಯೊಂದಿಗೆ ರೈತರ ಆದಾಯ ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರೈತರು ಬೆಳೆದ ಫಸಲಿಗೆ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ಕೆ ಸಂಕಲ್ಪ ಮುಖ್ಯವಾಗಿದೆ. ಕೇಂದ್ರ ಸರ್ಕಾರದ ಸಂಕಲ್ಪಸಿದ್ಧಿ ಕಾರ್ಯಕ್ರಮ ಯಶಸ್ಸುಗೊಳಿಸಲು ಎಲ್ಲರೂ ಶಪಥ ಮಾಡಬೇಕು. ಅಂದಾಗ ಮಾತ್ರ ಕೃಷಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಪಡೆಯಲು’ ಸಾಧ್ಯ ಎಂದರು. ‘ಈ ಐದು ವರ್ಷಗಳಲ್ಲಿ (2017–2022) ರೈತರ ಆದಾಯ ದ್ವಿಗುಣವಾಗಬೇಕು. ಹಾಗಾಗಿ ಸರ್ಕಾರ ಹಾಕಿಕೊಂಡ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿದೆ.
ಈ ಹಿಂದೆ ರೈತರಿಗೆ ಶೇ 50 ರಷ್ಟು ಬೆಳೆ ಹಾನಿಯಾದರೆ ಮಾತ್ರ ಪರಿಹಾರಧನ ಸಿಗುತ್ತಿತ್ತು. ಈಗ ಶೇ 33ರಷ್ಟು ಹಾನಿಗೊಳಗಾದರೂ ಪರಿಹಾರಧನ ದೊರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ’ ಎಂದರು.
‘ಯೂರಿಯಾ ಗೊಬ್ಬರದ ಅಭಾವವನ್ನು ಕೇಂದ್ರ ಸರ್ಕಾರ ನಿಯಂತ್ರಿಸಿದೆ. ಫಸಲ್ಭಿಮಾ ಯೋಜನೆ ಯಡಿ ನೀಡುವ ಪರಿಹಾರಧನ ವಿತರಣೆಯಲ್ಲಿ ತೊಂದರೆಯಾಗಿದೆ. ಅಧಿಕಾರಿಗಳ ಜೊತೆ ಚರ್ಚಿಸಿ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ ಮಾತನಾಡಿ, ‘ರೈತರಿಗೆ ಸರ್ಕಾರ ಹಲವಾರು ಯೋಜನೆ ಹಾಕಿಕೊಂಡಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವುದರ ಜೊತೆಗೆ ನೀರನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದರು.
ತೋಟಗಾರಿಕಾ ವಿಶ್ವವಿದ್ಯಾಲಯದ ಡೀನ್ ಡಾ.ಎಚ್.ಬಿ.ಪಾಟೀಲ ಉಪನ್ಯಾಸ ನೀಡಿದರು.
ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವಿ.ಐ. ಬೆಣಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಪಿ.ರಮೇಶಕುಮಾರ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಬಿ.ಎಂ.ದೇಸಾಯಿ, ಹಿರಿಯ ವಿಜ್ಞಾನಿ ಡಾ.ಮೌನೇಶ್ವರಿ ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.