ADVERTISEMENT

ವಿಶ್ವೇಶ್ವರಯ್ಯ ಆದರ್ಶ ಪಾಲಿಸಿ: ದಯಾನಂದ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 4:50 IST
Last Updated 16 ಸೆಪ್ಟೆಂಬರ್ 2011, 4:50 IST

ಬಾಗಲಕೋಟೆ: ಬಾಲ್ಯಾವಸ್ಥೆ ಯಲ್ಲಿಯೇ ವೈಜ್ಞಾನಿಕ  ಭಾವನೆ ಬೆಳೆಸಿಕೊಂಡು ಉನ್ನತ ಮಟ್ಟಕ್ಕೇರಿದ ಸರ್. ಎಂ. ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು  ನಿಶ್ಚಿತ ಗುರಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಇ ಆ್ಯಂಡ್ ಸಿ ವಿಭಾಗದ ಮುಖ್ಯಸ್ಥ ದಯಾನಂದ ಗುರವ ಸಲಹೆ ಮಾಡಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ನಡೆದ ಎಂಜಿನಿಯರ್ ದಿನಾಚರಣೆ ಅಂಗವಾಗಿ ಸರ್. ಎಂ. ವಿ. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಸರ್.ಎಂ.ವಿ. ಅವರು ಬಾಲ್ಯಾವಸ್ಥೆ ಯಲ್ಲಿಯೇ ಬಡತನವನ್ನು ಮೆಟ್ಟಿ ನಿಂತು ಶಿಕ್ಷಣ ಪಡೆದು ಉನ್ನತ ಸ್ಥಾನಕೇರುವ ಮೂಲಕ ಅಪಾರ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿ ದ್ದಾರೆ ಅವರ ಸರಳ ವ್ಯಕ್ತಿತ್ವ, ನಡೆ - ನುಡಿ ಹಾಗೂ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವು ಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವೈಜ್ಞಾನಿಕ ಮತ್ತು ತಂತ್ರಜ್ಞಾನದಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅರಿತಿದ್ದ ಅವರು ಆ ಕ್ಷೇತ್ರದಲ್ಲಿಯೇ ಸಾಧನೆ ಮಾಡಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ  ಎಂದರು.ಪಿ.ಎಸ್. ಬೇವಿನಗಿಡದ ಮಾತನಾಡಿ, ಸರ್. ಎಂ. ವಿಶ್ವೇಶ್ವರಯ್ಯನವರು  ಒಬ್ಬ ಮೇಧಾವಿ, ಧೀಮಂತ ವ್ಯಕ್ತಿತ್ವವುಳ್ಳವರಾಗಿದ್ದರು ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಎಸ್.ಬಿ. ಸತ್ಯನಾರಾಯಣ ಮಾತನಾಡಿ ಸರ್. ಎಂ. ವಿಶ್ವೇಶ್ವರಯ್ಯನವರಂತೆ ನಿಶ್ಚಿತ ಗುರಿಯೊಂದಿಗೆ ವಿದ್ಯಾರ್ಥಿಗಳು ಮುನ್ನಡೆದು ಸಮಾಜ ಹಾಗೂ ದೇಶಕ್ಕೆ ತಮ್ಮ ಸೇವೆ ಸಲ್ಲಿಸುವ ಮೂಲಕ  ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಹೆಚ್ಚಿನ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಸತ್ಕರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.