ADVERTISEMENT

ಸಂಗಮನಾಥನ ತೇರ ಎಳೆಯೋಣ ಬನ್ನಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 9:05 IST
Last Updated 22 ಏಪ್ರಿಲ್ 2011, 9:05 IST
ಸಂಗಮನಾಥನ ತೇರ ಎಳೆಯೋಣ ಬನ್ನಿ
ಸಂಗಮನಾಥನ ತೇರ ಎಳೆಯೋಣ ಬನ್ನಿ   

ಕೂಡಲಸಂಗಮ: ಅಂತರರಾಷ್ಟ್ರೀಯ ಪ್ರವಾಸಿ ತಾಣವಾದ ಕೂಡಲಸಂಗಮದ ಕ್ಷೇತ್ರಾಧಿಪತಿ ಹಾಗೂ ವಿಶ್ವಗುರು ಬಸವಣ್ಣನವರ ಆರಾಧ್ಯ ದೇವನಾದ ಸಂಗಮನಾಥನ ಜಾತ್ರಾ ಮಹೋತ್ಸವ ಏ. 22ರಂದು ಜರುಗುವುದು.

ಈ ಜಾತ್ರೆ ಬಹುದೊಡ್ಡದು. ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯದ   ಸಹಸ್ರಾರು ಭಕ್ತರು ಸೇರುತ್ತಾರೆ. ಜೀವ ನದಿಗಳಾದ ಕೃಷ್ಣಾ ಮಲಪ್ರಭೆಯ ಸಂಗಮ ಸ್ಥಳ ಇದಾಗಿದೆ.

ಎರಡು ನದಿಯ ದಂಡೆಯ ಮೇಲೆ ಸಂಗಮೇಶ್ವರ ದೇವಾಲಯವಿದೆ ಈ ದೇವಾಲಯವನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಶಾಸನದಲ್ಲಿ ಉಲ್ಲೇಖವಿದೆ. 1997ರಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಸ್ಥಾಪನೆಯ ನಂತರ ಸರ್ಕಾರದ ವತಿಯಿಂದ ಈ ಪುಣ್ಯ ಭೂಮಿಯಲ್ಲಿ ಆಶ್ಚರ್ಯ ಪಡುವಂಥ ಅಭಿವೃದ್ಧಿ ಕಾರ್ಯಗಳು ಆಗಿವೆಯಲ್ಲದೆ, ಮಹಾದ್ವಾರ, ಸಭಾ ಮಂಟಪ, ದಾಸೋಹ ಭವನ, ಬಸವ ಅಂತರರಾಷ್ಟ್ರೀಯ ಕೇಂದ್ರ, ಐಕ್ಯ ಮಂಟಪ ಮುಂತಾದವುಗಳು ಕಂಗೊಳಿಸುತ್ತಿವೆ.

ಜಾತ್ರೆಯು ಪ್ರತಿ ವರ್ಷ ಚೈತ್ರ ಮಾಸದ ಬಹುಳ ಪಕ್ಷದಲ್ಲಿ ನಡೆಯವುದು. ಸಂಗಮೇಶ್ವರ ರಥಕ್ಕೆ ಬಂಗಾರ ಲೇಪವುಳ್ಳ ಭವ್ಯವಾದ ಒಂದು ಕಳಸವನ್ನು ಅಮರಾವತಿಯ ದೇಸಾಯಿ ಮನೆತನದವರು ಮಾಡಿಸಿಕೊಟ್ಟಿರುವರು.

ಈ ಮೊದಲು ಕಳಸವು ಜಾತ್ರೆಯ ಒಂದು ದಿವಸ ಮೊದಲು ಅಮರಾವತಿಯಿಂದಲೇ ಬರುತ್ತಿತ್ತು ಎಂದು ಹೇಳಲಾಗುತ್ತದೆ. ಸದ್ಯ ಈ ಬಂಗಾರದ ಕಳಸವು ಬಾಗಲಕೋಟೆಯಿಂದ ಮೆರವಣಿಗೆಯಲ್ಲಿ ಪಾದಯಾತ್ರೆಯ ಮೂಲಕ ಸಂಗಮಕ್ಕೆ ಬರುವುದು.
 
ಈ ಕಳಸ ಬರುವಾಗ ಹಳ್ಳೂರ ಬೇವೂರ ಮುಂತಾದ ಗ್ರಾಮದ ಜನರು ಪೂಜೆಯನ್ನು ಮಾಡಿ ಜಾತ್ರೆಗೆ ಕಳುಹಿಸುವರು ಕೂಡಲಸಂಗಮಕ್ಕೆ ಬಂದ ಕಳಸವು ಮೆರವಣಿಗೆಯ ಮೂಲಕ ಕೂಡಲಸಂಗಮದ ಅಗಸಿಯ ಹತ್ತಿರ ಇಡಲಾಗುವುದು.

ಸಂಜೆ 5ಗಂಟೆಯವರೆಗೆ ಭಕ್ತರು ಬಂದು ಕಳಸದ ದರ್ಶನ ಪಡೆಯವರು ನಂತರ ಸಂಗಮೇಶ್ವರ ದೇವಾಲಯಕ್ಕೆ ಹೋಗಿ ಪೂಜೆಯನ್ನು ಮಾಡಿ ರಥವನ್ನು ಸಂಜೆ 5-30ಗಂಟೆಗೆ ಎಳೆಯವರು. ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವರು.

ರಥೋತ್ಸವದ ನಂತರ ಕೂಡಲಸಂಗಮ ಅಭಿವೃದ್ಧಿ  ಮಂಡಳಿ ವತಿಯಿಂದ ವರ್ಣರಂಜಿತ ಪಟಾಕಿಗಳ ಪ್ರದರ್ಶನ ನಡೆಯುವುದು. ರಾತ್ರಿ 8ಗಂಟೆಗೆ ಗದಗದ ಜಗದ್ಗುರು ತೋಟದಾರ್ಯ ಸಂಸ್ಥಾನಮಠದ ವಿಶ್ವಭಾರತಿ ರಮ್ಯ ನಾಟಕ ಸಂಘದವರಿಂದ  ಮಹದೇವ ಬಣಕಾರ ರಚನೆಯ ಬಸವರಾಜ ಬೆಂಗೇರಿ ನಿರ್ದೇಶನದ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವಾಗುವುದು. ಭಕ್ತರ ಸಂಪದ್ಬರಿತ ಭಕ್ತಿಯನ್ನು ಕಾಣಲು ಜಾತ್ರೆಗೆ ನೀವೂ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.