ADVERTISEMENT

ಸವಳು-ಜವಳಿನಿಂದ ಬದುಕು ಬರಡು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 7:20 IST
Last Updated 23 ಮಾರ್ಚ್ 2011, 7:20 IST
ಸವಳು-ಜವಳಿನಿಂದ ಬದುಕು ಬರಡು
ಸವಳು-ಜವಳಿನಿಂದ ಬದುಕು ಬರಡು   

ಮುಧೋಳ: ಮುಧೋಳ ಹಾಗೂ ಜಮಖಂಡಿ ತಾಲ್ಲೂಕಿನ ಒಟ್ಟು 3245 ಹೆಕ್ಟೇರ್ ಜಮೀನು ಸವಳು-ಜವಳಾಗಿದೆ. ಇದರಿಂದಾಗಿ ಭವಿಷ್ಯದ ಬಗ್ಗೆ ಭಯ ಹುಟ್ಟಿಸಿದೆ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು. ನಗರದ ಜಿ.ಎಲ್.ಬಿ.ಸಿ ಪ್ರವಾಸಿ ಮಂದಿರದ ಸಭಾಭವನದಲ್ಲಿ ಮಂಗಳವಾರ ನಡೆದ ಸವಳು-ಜವಳು ನಿರ್ಮೂಲನೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಮುಧೋಳ- ಜಮಖಂಡಿ ತಾಲ್ಲುಕುಗಳಲ್ಲಿ ಸವಳು-ಜವಳು ಹೆಚ್ಚಾಗುತ್ತಿದೆ. ಮುಧೋಳ ತಾಲ್ಲೂಕಿನಲ್ಲಿ ನಾಲಾಗಳ ನಿರ್ಮಾಣಕ್ಕೆ 18.35 ಹೆಕ್ಟೇರ್ ಪ್ರದೇಶಕ್ಕೆ  2.747 ಕೋಟಿ ರೂಪಾಯಿ, 2245 ಹೆಕ್ಟೇರ್ ಪ್ರದೇಶದಲ್ಲಿ ಅಂತರ ಬಸಿಗಾಲುವೆ ನಿರ್ಮಾಣಕ್ಕಾಗಿ 8.9657 ಕೋಟಿ ಮಂಜೂರು ಮಾಡಲಾಗಿದೆ, ಜಮಖಂಡಿ ತಾಲ್ಲೂಕಿನಲ್ಲಿ ನಾಲಾ ಗಳ ನಿರ್ಮಾಣಕ್ಕೆ 171.53 ಹೆಕ್ಟೇರ್ ಪ್ರದೇಶಕ್ಕೆ  ರೂ2.6 ಕೋಟಿ, 811 ಹೆಕ್ಟೇರ್ ಪ್ರದೇಶದಲ್ಲಿ ಅಂತರ ಬಸಿಗಾಲುವೆ ನಿರ್ಮಾಣಕ್ಕಾಗಿ ರೂ2.04 ಕೋಟಿ ಮಂಜೂರು ಮಾಡಲಾಗಿದೆ’ ಎಂದರು.

‘ಒಟ್ಟು ಎರಡೂ ತಾಲ್ಲೂಕುಗಳು ಸೇರಿ ಸವಳು-ಜವಳು ನಿರ್ಮೂಲನೆಗೆ ರೂ16.34 ಕೋಟಿ ಮಂಜೂರು ಮಾಡಲಾಗಿದೆ. ಸಮಸ್ಯೆ ತೀವ್ರಗತಿಯಲ್ಲಿ ಇರುವುದರಿಂದ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸರಕಾರಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಮುಧೋಳದ 2333 ಹೆಕ್ಟೇರ್ ಪ್ರದೇಶಕ್ಕೆ ಅಂತರ ಬಸಿಗಾಲುವೆ ನಿರ್ಮಾಣಕ್ಕಾಗಿ 9.38 ಕೋಟಿ ರೂಪಾಯಿ ಮತ್ತು ಜಮಖಂಡಿ ತಾಲ್ಲೂಕಿನ 1625 ಹೆಕ್ಟೇರ್ ಪ್ರದೇಶದಲ್ಲಿ ಅಂತರ್ ಬಸಿಗಾಲುವೆ ನಿರ್ಮಾಣಕ್ಕಾಗಿ ರೂ6.46 ಕೋಟಿಗಾಗಿ ಎಲ್ಲ ಮಾಹಿತಿಗಳನ್ನು ಒದಗಿಸಲಾಗಿದೆ’ ಎಂದರು.

ಜಮಖಂಡಿ ಶಾಸಕ ಶ್ರಿಕಾಂತ ಕುಲಕರ್ಣಿ, ತೇರದಾಳ ಶಾಸಕ ಸಿದ್ದು ಸವದಿ ತಮ್ಮ ಕ್ಷೇತ್ರಗಳಲ್ಲಿ ಸವಳು-ಜವಳು ಪ್ರದೇಶದ ತೀವ್ರತೆ ಬಗ್ಗೆ ಮತ್ತು ರೈತರು ಅದರಿಂದ ಪಡುತ್ತಿರುವ ಸಮಸ್ಯೆಯ ಬಗ್ಗೆ ತಿಳಿಸಿದರು. ಕಾಡಾ ಆಡಳಿತಾಧಿಕಾರಿ ಎ.ಜೆ.ದುಮಾಳೆ ಮಾತನಾಡಿ ರೈತರು ನೀರನ್ನು ಮಿತವಾಗಿ ಬಳಸಬೇಕು. ವೈಜ್ಞಾನಿಕವಾಗಿ ಸವಳು-ಜವಳು ನಿರ್ಮೂಲನೆಗೆ ಸರಕಾರದೊಂದಿಗೆ ಸಹಕರಿಸಬೇಕು ಎಂದರು. ಬೆಳಗಾವಿಯ ಕಾಡಾ ಮುಖ್ಯ ಎಂಜಿನಿ ಯರ್ ಎ.ಎನ್.ಜಾನ್ವೇಕರ, ಸುಪರಿಂಟೆಂಡೆಂಟ್ ಇಂಜಿನೀಯರುಗಳಾದ ಕೆ.ಎಫ್.ಹುಲಕುಂದ, ಎ.ಎಲ್.ವಾಸನದ, ಕಲ್ಯಾಣಿ ಉಪಸ್ಥಿತರಿದ್ದರು. ಜಿ.ಎಲ್.ಬಿ.ಸಿ ಇಂಜಿನಿಯರ್ ಯು.ಎಸ್.ಕುಲಕರ್ಣಿ ಸ್ವಾಗತಿಸಿ, ಸವಳು-ಜವಳು ಸಮಸ್ಯೆ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.