ಜಮಖಂಡಿ: ದುಬಾರಿ ಬೆಲೆಯ ರಸಗೊಬ್ಬರವನ್ನು ಜಮೀನಿಗೆ ಹಾಕುವುದಕ್ಕಿಂತ ಬೇವಿನ ಹಿಂಡಿ, ಎರೆಹುಳು ಗೊಬ್ಬರದಂತಹ ಸಾವಯವ ಗೊಬ್ಬರ ಹಾಕುವ ಮೂಲಕ ಕೃಷಿ ಖರ್ಚನ್ನು ತಗ್ಗಿಸಿ ಇಳುವರಿ ಹೆಚ್ಚಿಸಬಹುದು ಎಂದು ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
ಕೃಷಿ ಇಲಾಖೆ ಜಮಖಂಡಿ ಹಾಗೂ ಆದಿನಾಥ ರೈತಶಕ್ತಿ ಗುಂಪು ಆಲಗೂರ ಇವರ ಆಶ್ರಯದಲ್ಲಿ ತಾಲ್ಲೂಕಿನ ಸನಾಳ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಬೇವಿನ ಹಿಂಡಿ ಮತ್ತು ಎರೆಹುಳು ಗೊಬ್ಬರ ತಯಾರಿಕಾ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಯವ ಕೃಷಿಯಿಂದ ಉತ್ತಮ ಗುಣಮಟ್ಟದ ಆಹಾರದ ಜೊತೆಗೆ ಜಮೀನಿನ ಫಲವತ್ತತೆಯನ್ನು ಸಹ ಕಾಪಾಡಬಹುದು. ಮುಂದಿನ ದಿನಗಳಲ್ಲಿ ಲಾಭ ಗಳಿಕೆಗಿಂತ ಭೂಸಾರ ಸಂರಕ್ಷಣೆ ಮುಖ್ಯವಾಗಲಿದೆ ಎಂದು ಅವರು ಹೇಳಿದರು.
ಬೇವಿನ ಬೀಜದ ಮಹತ್ವ ಮತ್ತು ಅದರ ಔಷಧಿಯ ಗುಣಗಳ ಕುರಿತು ಜಿಲ್ಲಾ ಪಂಚಾಯಿತಿ ಸದಸ್ಯ ಅರ್ಜುನ ದಳವಾಯಿ, ಮುಧೋಳ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಬಿ.ಟಿ. ನಾಡಗೌಡ, ಜಿಲ್ಲಾ ಉಪ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ವೈ.ಟಿ. ಗುಡ್ಡದ, ಜಿಲ್ಲಾ ತಾಂತ್ರಿಕ ಸಲಹೆಗಾರ ಮಹಾಂತೇಶ ಅವಟಗೇರಿ ಮಾತನಾಡಿದರು.
ತಾ.ಪಂ. ಅಧ್ಯಕ್ಷೆ ಮಹಾದೇವಿ ಹುಕ್ಕೇರಿ, ತಾ.ಪಂ. ಉಪಾಧ್ಯಕ್ಷ ನಿಂಗಪ್ಪ ಹೆಗಡೆ, ತಾ.ಪಂ. ಸದಸ್ಯೆ ಅನಂತಮತಿ ಪರಮಗೊಂಡ, ಗ್ರಾ.ಪಂ. ಅಧ್ಯಕ್ಷೆ ಯಂಕವ್ವ ಕಡಕೋಳ, ಗ್ರಾ.ಪಂ. ಸದಸ್ಯ ಯಮನಪ್ಪ ತೇಲಿ, ನಾಗಪ್ಪ ಹೆಗಡೆ, ವಿಜಾಪುರ- ಬಾಗಲಕೋಟೆ ಜಿಲ್ಲೆಗಳ ಕೆಎಂಎಫ್ ಅಧ್ಯಕ್ಷ ಪಿ.ಟಿ. ಪಾಟೀಲ, ಮಹಾವೀರ ಉಪಾಧ್ಯಾಯ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಎಚ್.ಕೆ. ನ್ಯಾಮಗೌಡರ ಸ್ವಾಗತಿಸಿದರು. ಬಾಹುಬಲಿ ಪರಮಗೊಂಡ ನಿರೂಪಿಸಿದರು. ಕೃಷಿ ಸಹಾಯಕ ಎನ್.ಕೆ. ಜೋಶಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.