ADVERTISEMENT

ಸಾಹಿತ್ಯ ಚಟುವಟಿಕೆಗೆ ಸಹಕಾರ: ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 8:20 IST
Last Updated 5 ಜುಲೈ 2012, 8:20 IST

ಕೂಡಲಸಂಗಮ: ಹುನಗುಂದ ತಾಲ್ಲೂಕಿನಲ್ಲಿ ಬರಹಗಾರರು, ಸಾಹಿತಿಗಳು, ಕಲಾವಿದರು, ಜಾನಪದ ಸಾಹಿತಿಗಳು ಅಧಿಕ ಪ್ರಮಾಣದಲ್ಲಿ ಇದ್ದಾರೆ. ಇಂತಹ ಸಾಹಿತಿಗಳಿಂದ  ಹುನಗುಂದ ರಾಜ್ಯ ಮಟ್ಟದ ಸಾಹಿತ್ಯದಲ್ಲಿ ಗುರುತಿಸಿಕೊಂಡಿದೆ, ಸಾಹಿತ್ಯ ಚಟುವಟಿಕೆಗಳಿಗೆ ನಾನು ಯಾವಾಗಲೂ ಸಹಕಾರ ಕೊಡುತ್ತೇನೆ ಎಂದು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಅವರು ಕೂಡಲಸಂಗಮದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದಲ್ಲಿ ನಡೆದ ಹುನಗುಂದ ತಾಲ್ಲೂಕು ಘಟಕದ ಅಧಿಕಾರ ಪದಗ್ರಹಣ ಹಾಗೂ 2012 ರಿಂದ 2015ರ ವರೆಗಿನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಅನಕ್ಷರಸ್ಥ ಮಹಿಳೆಗೆ ಅಕ್ಷರವನ್ನು ಬರೆಸುವ ಮೂಲಕ ವಿನೂತನ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಮಖಂಡಿ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದರಾಮ ಮನಹಳ್ಳಿ ಮಾತನಾಡಿ ಸಮಾಜಕ್ಕೆ ಬುದ್ಧಿ ಹೇಳುವ ಶಕ್ತಿ ಸ್ವಾಮೀಜಿ, ಶಿಕ್ಷಕರು, ಸಾಹಿತಿಗಳಿಗೆ ಮಾತ್ರ ಇದೆ. ಸುಂದರ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಬಹಳ ಅವಶ್ಯವಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಇಲಕಲ್ಲ ವಿಜಯ ಮಹಾಂತ ಮಠದ ಡಾ.ಮಹಾಂತ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎ.ಎಂ.ಮಡಿವಾಳರ, ಎನ್.ಎಂ.ಚಿನ್ನಣ್ಣವರ, ಎಲ್.ಎಂ.ಪಾಟೀಲ,  ಜಾಕೀರಹುಸೇನ್ ತಾಳಿಕೋಟಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಮಹಾಂತೇಶ ಗಜೇಂದ್ರಗಡ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಸಮಾರಂಭದಲ್ಲಿ ಸಿದ್ಧರಾಮ ಮನಹಳ್ಳಿ, ಎ.ಎಂ. ಮಡಿವಾಳರ, ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅವರನ್ನು ಸನ್ಮಾನಿಸಲಾಯಿತು.

ಎಚ್.ಕೆ.ನಾಗನೂರ ಪ್ರಾರ್ಥನಾ ಗೀತೆ ಹಾಡಿದರು. ವಿಜಯಕುಮಾರ ಗದ್ದನಕೇರಿ ಸ್ವಾಗತಿಸಿದರು, ಮಹಾಂತೇಶ ಗಜೇಂದ್ರಗಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಂತೇಶ ಹಳ್ಳೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.