ADVERTISEMENT

ಸಿದ್ದಾಪುರ: ಕಾಸರವಳ್ಳಿ ಚಲನಚಿತ್ರೋತ್ಸವ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 7:05 IST
Last Updated 26 ಸೆಪ್ಟೆಂಬರ್ 2011, 7:05 IST

ಸಿದ್ದಾಪುರ: `ಜನಪ್ರಿಯ ಮತ್ತು ಕಲಾತ್ಮಕ ಚಲನಚಿತ್ರಗಳ ನಡುವೆ ದೊಡ್ಡದಾದ ಕಂದಕವಿದ್ದು, ಅವೆರಡನ್ನು ಒಂದಾಗಿಸುವ ಪ್ರಯತ್ನ ನಡೆಯುತ್ತಿಲ್ಲ~ ಎಂದು ಹಿರಿಯ ಸಾಹಿತಿ ನಾ.ಡಿಸೋಜ ಅಭಿಪ್ರಾಯಪಟ್ಟರು.

ಸ್ಥಳೀಯ ಸಂಸ್ಕೃತಿ ಸಂಪದದ ಆಶ್ರಯದಲ್ಲಿ ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಬಳಗ, ಪಟ್ಟಣದ ರಂಗಸೌಗಂಧ ಮತ್ತು ಒಡ್ಡೋಲಗದ ಸಹಕಾರದೊಂದಿಗೆ ಸ್ಥಳೀಯ ಶಂಕರಮಠದಲ್ಲಿ ಭಾನುವಾರ ಸಂಜೆ ಏರ್ಪಡಿಸಲಾದ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ `ಚಲನಚಿತ್ರೋತ್ಸವ-2011~ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿನಿಮಾ ಸೇರಿದಂತೆ ಎಲ್ಲ ಕಲಾ ಮಾಧ್ಯಮಗಳಲ್ಲಿಯೂ  ಜನಪ್ರಿಯ ಮತ್ತು ಜನಪ್ರಿಯವಲ್ಲದ ಪ್ರಕಾರಗಳಿದ್ದು, ಅವೆರಡೂ ಭಿನ್ನವಾಗಿಯೇ ಬೆಳೆಯುತ್ತಿವೆ ಎಂದರು.

ಕಲಾತ್ಮಕ ಚಿತ್ರಗಳಿಗೆ ಗಿರೀಶ್ ಕಾಸರವಳ್ಳಿ ದೊಡ್ಡದಾದ ಗೌರವ ಮತ್ತು ಹೆಸರನ್ನು ತಂದುಕೊಟ್ಟರು  ಔಷಧಿ ಶಾಸ್ತ್ರದ ಪದವಿ ಪಡೆದಿದ್ದ ಗಿರೀಶ್ ಕಾಸರವಳ್ಳಿ ಅಂದಿನ ನವ್ಯ ಸಾಹಿತ್ಯದ  ಪ್ರಭಾವಕ್ಕೆ ಒಳಗಾಗಿ ಪುಣೆಯ ಫಿಲಂ ಇನ್ಸ್‌ಸ್ಟಿಟ್ಯೂಟ್‌ಗೆ ಸೇರಿದರು. ಅಲ್ಲಿ ಅವರು ನಿರ್ಮಿಸಿದ ಮೊದಲ ಚಿತ್ರಕ್ಕೆ ಅಂತರರಾಷ್ಟ್ರೀಯ ಗೌರವ ಪ್ರಾಪ್ತವಾಯಿತು ಎಂದರು.

ಚಲನಚಿತ್ರೋತ್ಸವ ಉದ್ಘಾಟಿಸಿದ ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್‌ಕುಮಾರ್ ಮಾತನಾಡಿ, ಕಲಾತ್ಮಕ ಚಿತ್ರಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿಯಾಗುತ್ತವೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಮತ್ತು ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಸಮೂಹದ ವನಜಾಕ್ಷಿ ಕೊಳಗಿ ಮಾತನಾಡಿದರು. 

ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ನಿರೂಪಿಸಿದರು. ಚಲನಚಿತ್ರೋತ್ಸವದ ಮೊದಲ ದಿನವಾದ ಭಾನುವಾರ `ದ್ವೀಪ~ ಚಿತ್ರ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.