ಬಾಗಲಕೋಟೆ: ಸಮೀಪದ ಸೀಮಿಕೇರಿಯ ಪಿಡಿಒ ಮನೆಗಳ ಉತಾರಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಮಂಗಳವಾರ ಮುತ್ತಿಗೆ ಹಾಕಿದರು.
‘ನಮ್ಮ ಮನೆಗಳ ಉತಾರ ನಮಗೆ ನೀಡುತ್ತಿಲ್ಲ, ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ’ ಎಂದು ಗ್ರಾಮಸ್ಥರು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಲಾದಗಿ ಪಿಎಸ್ಐ ಮಲ್ಲಿಕಾರ್ಜುನ ಬಿರಾದರ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನಿಸಲು ಪ್ರಯತ್ನಪಟ್ಟರು. ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು ಮೇ 23ರಂದು ಕಾನೂನು ಬದ್ಧವಾಗಿ ಹೋರಾಟ ಮಾಡುವ ನಿರ್ಧಾರ ತೆಗೆದುಕೊಂಡರು.
‘ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಎನ್ಎ ಆಗದ ನಿವೇಶನಗಳಿಗೆ ಉತಾರ ನೀಡಬಾರದು ಎಂದು 2017ರಲ್ಲಿ ಸರ್ಕಾರದಿಂದ ಆದೇಶವಾದ ಕಾರಣ ನಾನು ಉತಾರ ನೀಡಿಲ್ಲ. ಹಾಗೂ ಒಂದು ವೇಳೆ ಉತಾರ ನೀಡಬೇಕಾದಲ್ಲಿ ಅದರ ನಿರ್ಣಯವನ್ನು ಗ್ರಾಮ ಪಂಚಾಯ್ತಿ ಸದಸ್ಯರು ಮಾಡಬೇಕು. ಸದಸ್ಯರ ಸಭೆ ನಡೆಯದೆ ಅವರಿಂದ ಯಾವುದೇ ತೀರ್ಮಾನ ಬಂದಿಲ್ಲ’ ಎಂದು ಪಿಡಿಒಶ್ರೀದೇವಿ ಮಡಿವಾಳ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿಭಟನೆಯಲ್ಲಿಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾಂತವ್ವ ಮಾದರ,ಅಪ್ಪಣಗೌಡ ಹಟ್ಟಿ, ಕಲ್ಲಪ್ಪ ಶಿರಬಡಗಿ,ಬೆಣ್ಣೆಪ್ಪ ಸುನಗದ, ನಿಂಗಪ್ಪ ಗೌಡರ, ನೀಲವ್ವ ತಳವಾರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.