ADVERTISEMENT

‘ಮಾರುಕಟ್ಟೆ ಆಧಾರಿತ ನೂತನ ಕೃಷಿ ವಿಧಾನ ಅನುಸರಿಸಿ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 9:01 IST
Last Updated 13 ಮಾರ್ಚ್ 2014, 9:01 IST

ಕೆರೂರ: ಇಂದಿನ ಬದಲಾದ ಕೃಷಿ ನೀತಿ­ಯಲ್ಲಿ ರೈತರು ಅರ್ಥಿಕ ಸಂಕಷ್ಟದ ಬದುಕಿ­ನಿಂದ ಪ್ರಗತಿಯತ್ತ ಸಾಗಲು ರೈತಕೂಟಗಳನ್ನು ರಚಿಸಿಕೊಂಡು ಅವು­ಗಳ ಸಕ್ರಿಯ ಕಾರ್ಯ ನಿರ್ವ­ಹಣೆಯ ಜೊತೆಗೆ ಮಾರುಕಟ್ಟೆ ಆಧಾ­ರಿತ ನೂತನ ಕೃಷಿ ವಿಧಾನ ಅಳವಡಿಸಿಕೊಂಡು ಅಧಿಕ ಲಾಭ ಗಳಿಸಲು ಮುಂದಾಗಲು ಔಟ್‌­ರೀಚ್ ಸಂಸ್ಥೆ ಯೋಜನಾ ಸಂಯೋಜಕ ಬಿ. ಗೋವಿಂದಯ್ಯ ಸಲಹೆ ನೀಡಿದರು.

ಇಲ್ಲಿಗೆ ಸಮೀಪದ ಅಗಸನಕೊಪ್ಪ ಗ್ರಾಮದ ಪಾಂಡುರಂಗ-–ರುಕ್ಮಿಣಿ ದೇವಸ್ಥಾನ­­ದಲ್ಲಿ ಬಾಗಲಕೋಟೆಯ ನಬಾರ್ಡ್‌ ಹಾಗೂ ಔಟ್‌ರೀಚ್ ಸಂಸ್ಥೆಯ ಸಹಯೋಗ­ದಲ್ಲಿ ಹೊಸ­ದಾಗಿ ರಚನೆಗೊಂಡ ಐದು ರೈತಕೂಟ­ಗಳ ಉದ್ಘಾಟನೆ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನ್ನದಾತ ಪ್ರಮುಖ ಬೆಳೆಗಳ ಉತ್ಪಾದಕರ ಸಂಘದ ಅಧ್ಯಕ್ಷ ಅಶೋಕ ನಾಯಕ, ರೈತರು ಕೃಷಿ ಉತ್ಪನ್ನಗಳನ್ನು ಉತ್ಪಾದಕರ ಸಂಘದ ಮೂಲಕ ನೇರ­ವಾಗಿ ಮಾರಾಟ ಮಾಡಿದರೆ ಕೃಷಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯ ಎಂಬು­ದನ್ನು ಬಾದಾಮಿ ಭಾಗದ ರೈತರು ಸಾಬೀತುಪಡಿಸಿದ್ದಾರೆ ಎಂದರು.

ನಬಾರ್ಡ್‌ ನೆರವಿನಿಂದ ಫಕೀರ­ಬೂದಿಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಮುಖ ಬೆಳೆಗಳ ಉತ್ಪಾದನೆ ಹೆಚ್ಚಿಸುವ ಪ್ರಯೋಜನ­­ಕಾರಿ ಕಾರ್ಯಕ್ರಮದಿಂದ ಆಗುವ ಸದುಪಯೋಗಗಳ ಕುರಿತು ಅವರು ವಿವರಿಸಿದರು.

ಕ್ಷೇತ್ರಾಧಿಕಾರಿ ಸತೀಶ ರಕರಡ್ಡಿ ಪ್ರಾಸ್ತಾವಿಕವಾಗಿ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಆರ್.ಕೆ. ದುದಿ­ಹಳ್ಳಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹನಮಂತಗೌಡ್ರ ಪಾಟೀಲ, ಅಗಸನಕೊಪ್ಪದ ಕೈಗಾರಿಕೆ ಉದ್ಯಮಿ ಎಸ್. ಎಸ್. ಸರಗಣಾಚಾರಿ  ಮಾತನಾಡಿದರು.

ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಬಿ.ಎಚ್. ನರಹಟ್ಟಿ, ಕೃಷಿ­ಯಲ್ಲಿನ ತಾಂತ್ರಿಕತೆ ಮತ್ತು ಅದನ್ನು ಅಳವಡಿಸವ ಸುಲಭದ ಮಾರ್ಗಗಳ ಬಗೆಗೆ ಹಾಗೂ ಕೃಷಿ ಇಲಾಖೆಯ ರೈತ ಉಪಯೋಗಿ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ತಿಳಿಸಿದರು. 

ನಬಾರ್ಡ್‌ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು, ಬಾದಾಮಿ ತಾಲ್ಲೂಕು ಕೆರೂರ ಹೋಬ­ಳಿಯ ಅಗಸನಕೊಪ್ಪ, ಕಲಬಂದ­ಕೇರಿ, ಮಾಲಗಿ, ಮೋಹನ­ಪುರ, ಬಂದಕೇರಿ ಗ್ರಾಮದ ರೈತಕೂಟಗಳ ರೈತರು ಹಾಗೂ ಔಟ್‌ರೀಚ್ ಸ್ವಯಂ ಸೇವಾ­ಸಂಸ್ಥೆ ಪ್ರತಿನಿಧಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನರು ತರಬೇತಿಯಲ್ಲಿ ಭಾಗವಹಿಸಿದ್ದರು.

ಅಗಸನಕೊಪ್ಪದ ಎಚ್‌ಪಿಎಸ್ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿ­ದರು. ಔಟರೀಚ್‌ನ ಕ್ಷೇತ್ರಾಧಿಕಾರಿ ಬಸವ ರಾಜ ಕಮತರ ನಿರೂಪಿಸಿದರು. ಸತೀಶ ರಕರಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.