ಬಾಗಲಕೋಟೆ: ದೇಶದಲ್ಲೇ ಪ್ರಥಮ ಬಾರಿಗೆ ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯ ಆಯ್ದ 200 ರೈತರಿಗೆ ಕೃಷಿ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಖಾಸಗಿಯಾಗಿ ಉಚಿತ ಟ್ಯಾಬ್ಲೆಟ್ಗಳನ್ನು ಇದೇ 4ರಂದು ವಿತರಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ ತಿಳಿಸಿದರು.
ಬಾಗಲಕೋಟೆಯ ಬಾಪೂಜಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಬೆಂಗಳೂರಿನ ವರ್ಚ್ಯುಸ್ಸ್ ಐ.ಟಿ.ಸಲ್ಯೂಶನ್ಸ್ (Virtuex IT Solutions) ಸಹಭಾಗಿತ್ವದಲ್ಲಿ ‘ನಮ್ಮ ರೈತ’ (ekisaan) ಯೋಜನೆಯಡಿ ರೈತರಿಗೆ ಟ್ಯಾಬ್ಲೆಟ್ ವಿತರಿಸಲಾಗುತ್ತಿದೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ರೈತರಿಗೆ ಟ್ಯಾಬ್ಲೆಟ್ ವಿತರಣೆ ಪ್ರಾಯೋಗಿಕ ಕಾರ್ಯಕ್ರಮ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ಮೂಲಕ ರಾಜ್ಯದ ರೈತರಿಗೆ ವಿತರಿಸುವ ಚಿಂತನೆ ಇದೆ ಎಂದರು.
ಅಮೆರಿಕಾದಲ್ಲಿ ಸಾಫ್ಟ್ವೇರ್್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದವರೇ ಆದ ಗೌರಿಶಂಕರ್, ಶ್ರೀಕುಮಾರ್ ಮತ್ತು ಪ್ರಮಿತ ಮೆಕಾಡೆ ಆರು ತಿಂಗಳ ಕಾಲ ಶ್ರಮ ವಹಿಸಿ ನೂತನ ತಂತ್ರಾಂಶವನ್ನು ಕನ್ನಡದಲ್ಲಿ ಸಿದ್ಧಪಡಿಸಿದ್ದಾರೆ ಎಂದರು.
ಟ್ಯಾಬ್ಲೆಟ್ ಸಹಾಯದಿಂದ ರೈತರು ಹವಾಮಾನ ಮಾಹಿತಿ, ಮುನ್ನೆಚ್ಚರಿಕೆ, ಯಾವ ಬೆಳೆಗೆ ಎಷ್ಟು ಪ್ರಮಾಣದ ಔಷಧಿ, ಗೊಬ್ಬರ ಬಳಸಬೇಕು, ಮಣ್ಣು ಪರೀಕ್ಷೆ, ಮಾರುಕಟ್ಟೆ ಮಾಹಿತಿ, ಕೃಷಿ ತಜ್ಞರಿಂದ ಸಲಹೆ, ಸರ್ಕಾರದ ಕೃಷಿ ಕಾರ್ಯಕ್ರಮ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ, ವಿವಿಧ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಸಂಶೋಧನಾ ಮಾಹಿತಿ, ಬೆಳೆ ವಿಮಾ ಮಾಹಿತಿ, ಬೆಳೆ ಸಂಸ್ಕರಣೆ, ಹೈನುಗಾರಿಕೆ, ಆರೋಗ್ಯ ಮಾಹಿತಿ ಜತೆಗೆ ದೂರವಾಣಿ ಸೌಲಭ್ಯ ಸಹ ಕಲ್ಪಿಸಲಾಗಿದೆ ಎಂದು ಹೇಳಿದರು.
ಕೃಷಿ ಮಾಹಿತಿ ಹೊರತು ಬೇರೆ ಯಾವುದೇ ಮಾಹಿತಿಗಳು ಟ್ಯಾಬ್ಲೆಟ್ನಲ್ಲಿ ದೊರೆಯದಂತೆ ಅಥವಾ ಸಂಪರ್ಕ ಹೊಂದಲು ಸಾಧ್ಯವಾಗದಂತೆ ನಿರ್ಬಂಧವಿರುತ್ತದೆ. ಟ್ಯಾಬ್ಲೆಟ್ ಪಡೆದುಕೊಳ್ಳುವ ರೈತರಿಗೆ ಅದರ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ನಾಳೆ ವಿತರಣೆ
ಬಾಗಲಕೋಟೆ ನವನಗರದ ಕಲಾಭವನದಲ್ಲಿ ಇದೇ 4ರಂದು ಬೆಳಿಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ರೈತರಿಗೆ ಟ್ಯಾಬ್ಲೆಟ್ ವಿತರಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.