ADVERTISEMENT

ಅಗಸನಕೊಪ್ಪ: ನಿಶ್ಚಿತಾರ್ಥಕ್ಕೆ ಹೊರಟಿದ್ದವರು ಮಸಣಕ್ಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 16:53 IST
Last Updated 20 ನವೆಂಬರ್ 2020, 16:53 IST
ಕೆರೂರ ಬಳಿಯ ಅಗಸನಕೊಪ್ಪದಲ್ಲಿ ಭೀಕರ ಅಪಘಾತದಿಂದ ಮೃತಪಟ್ಟ ಗೋಡಿ ಪರಿವಾರದ ಆಕ್ರಂದನ ಮುಗಿಲು ಮುಟ್ಟಿತ್ತು
ಕೆರೂರ ಬಳಿಯ ಅಗಸನಕೊಪ್ಪದಲ್ಲಿ ಭೀಕರ ಅಪಘಾತದಿಂದ ಮೃತಪಟ್ಟ ಗೋಡಿ ಪರಿವಾರದ ಆಕ್ರಂದನ ಮುಗಿಲು ಮುಟ್ಟಿತ್ತು   

ಕೆರೂರ: ಕೊಪ್ಪಳ ಜಿಲ್ಲೆ ಕುಕನೂರ ಬಳಿಯ ಹಿರೇ ಸಿಂಧೋಗಿ ಗ್ರಾಮಕ್ಕೆ ಮದುವೆ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ತೆರಳುತ್ತಿದ್ದ ಸಮೀಪದ ಅಗಸನಕೊಪ್ಪ ಗ್ರಾಮದ ನಾಲ್ವರು ಅಪಘಾತದಲ್ಲಿ ಸಾವನ್ನಪ್ಪಿದ್ದು ಕುಟುಂಬದವರನ್ನು ಹಾಗೂ ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಬೆಳಿಗ್ಗೆ 10 ಗಂಟೆ ಅಗಸನಕೊಪ್ಪದಿಂದ ಲಕ್ಸುರಿ ಟೆಂಪೊದಲ್ಲಿ ತೆರಳಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ನಿಟ್ಟಾಣಿ ಕ್ರಾಸ್ ಬಳಿ ಇವರ ವಾಹನಕ್ಕೆ ಅಡ್ಡಲಾಗಿ ಬಂದ ಬೈಕ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಕಂದಕ ಬಿದ್ದು ಈ ಅವಘಡ ಸಂಭವಿಸಿದೆ.

ಅಗಸನಕೊಪ್ಪ ಗ್ರಾಮದ ಬಿಜೆಪಿ ಮುಖಂಡ, ಗ್ರಾಮ ಪಂಚಾಯ್ತಿ ಸದಸ್ಯ ಹನಮಂತ ಗೋಡಿ ಅವರ ತಾಯಿ ಭೀಮವ್ವ ಗೋಡಿ (70), ರಂಗಪ್ಪ ನಾಗಣ್ಣವರ (78), ಶಿವಾನಂದ ನಾಗಪ್ಪ ಬಿಂಕದಕಟ್ಟಿ (60) ಮತ್ತು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಸಂಗಪ್ಪ ಮುಂಜಪ್ಪನವರ (50) ಮೃತಪಟ್ಟಿದ್ದಾರೆ. ಟೆಂಪೊದಲ್ಲಿದ್ದ ಇನ್ನಿತರ 10 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ADVERTISEMENT

ಹಿರಿಯ ಜೀವಗಳೇ ಇನ್ನಿಲ್ಲ: ದಿನವಿಡೀ ಕೃಷಿ ಕಾಯಕದಲ್ಲಿ ತೊಡಗಿ, ಸಣ್ಣವರನ್ನು ಪ್ರೋತ್ಸಾಹಿಸುತ್ತ ಸಂತಸದಿಂದ ಜೀವನ ಸಾಗಿಸುತ್ತಿದ್ದ ಆ ನಾಲ್ವರು ಹಿರಿಯರನ್ನು ಕಳೆದುಕೊಂಡ ಅಗಸನಕೊಪ್ಪ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.

ತಮ್ಮರನ್ನು ಕಳೆದುಕೊಂಡ ಬಂಧು, ಬಾಂಧವರು, ಕುಟುಂಬದ ಜನರು ಬಾಯಿ ಬಡಿದುಕೊಂಡು ರೋದಿಸುತ್ತಿರುವುದು ಮನಕಲಕುವಂತಿತ್ತು. ಕುಟುಂಬಕ್ಕೆ ಹಿರಿಯರಾಗಿದ್ದ ಭೀಮವ್ವಳನ್ನು ಕಳೆದುಕೊಂಡ ಗೋಡಿ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟಿತ್ತು.

ತಮ್ಮನ್ನು ಕಾಲೇಜು ಉಪನ್ಯಾಸಕರನ್ನಾಗಿ ಮಾಡಲು ಸಾಕಷ್ಟು ಕಷ್ಟಪಟ್ಟು, ಈಗಲೂ ವಿಶ್ರಮಿಸದೇ ಕೃಷಿಯಲ್ಲಿ ತೊಡಗುತ್ತಿದ್ದ ರಂಗಪ್ಪ ನಾಗಣ್ಣವರ ನಿಧನದಿಂದ ಗರ ಬಡಿದವರಂತೆ ಆಗಿದ್ದ ಅವರ ಪುತ್ರ, ಪದವಿ ಕಾಲೇಜು ಉಪನ್ಯಾಸಕ ಶಿವಾನಂದ ಅವರು, ‘ಇಷ್ಟು ವರ್ಷ ದುಡಿದ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಲು ಹೊಸ ಕಾರು ತಂದಿದ್ದೆ. ಆದರೂ ಬರಿಗಾಲಲ್ಲೇ ಅವರು ಸಂಚರಿಸುತ್ತಿದ್ದರು‘ ಎಂದು ತಂದೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲರಿಗೂ ಕಣ್ಣೀರು ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.