ಮುಧೋಳ: ’ಖಾಸಗಿ ಸಕ್ಕರೆ ಕಾರ್ಖಾನೆಯೊಂದರ ಆಡಳಿತ ಮಂಡಳಿಯ ಕೆಲವರು ರೈತ ಹೋರಾಟಗಾರ ವಿಶ್ವನಾಥ ಉದಗಟ್ಟಿ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ವಿಜಯಪುರ–ಬೆಳಗಾವಿ ರಾಜ್ಯ ಹೆದ್ದಾರಿಯನ್ನು ಒಂದು ತಾಸು ತಡೆದು ಪ್ರತಿಭಟನೆ ನಡೆಸಿದ ರೈತರು ಹಲ್ಲೆಕೋರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ‘ವಿಶ್ವನಾಥ ಉದಗಟ್ಟಿ ಮೇಲೆ ನಡೆದಿರುವ ಹಲ್ಲೆ ಮಾಡಿರುವುದನ್ನು ಹಾಗೂ ಕೊಲೆ ಬೆದರಿಕೆ ಹಾಕಿರುವುದನ್ನು ಸಂಘಟನೆ ವತಿಯಿಂದ ಬಲವಾಗಿ ಖಂಡಿಸುವುದಾಗಿ’ ಹೇಳಿದರು.
‘ಹಲ್ಲೆಕೋರರನ್ನು ಕೂಡಲೇ ಬಂಧಿಸಬೇಕು. ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ತೊಂದರೆಗೀಡಾದವರಿಗೆ ನ್ಯಾಯ ಒದಗಿಸಬೇಕು. ಮುಂದಿನ ದಿನಗಳಲ್ಲಿ ವಿಶ್ವನಾಥಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಕೋಮಾರ ಆಗ್ರಹಿಸಿದರು.
ಸಂಜೆ ನಗರದ ಜಡಗಣ್ಣ ಬಾಲಣ್ಣ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಘಟನೆ ಖಂಡಿಸಿ ಹೆದ್ದಾರಿ ಬಂದ್ ಮಾಡಿದರು.
ರೈತ ಮುಖಂಡರಾದ ಈರಪ್ಪ ಹಂಚಿನಾಳ, ಸಂಗಪ್ಪ ನಾಗರಡ್ಡಿ ಅವರು ಘಟನೆ ಖಂಡಿಸಿ ಮಾತನಾಡಿದರು. ಹಣಮಂತ ನಬಾಬ, ಸುಭಾಷ್ ಶಿರಬೂರ ಮುಂತಾದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ರಸ್ತೆ ಬಂದ್ ಆದ ಕಾರಣ ಸವದತ್ತಿ ಯಲ್ಲಮ್ಮನ ಗುಡ್ಡದ ಭಕ್ತರು, ಬಾದಾಮಿ ಬನಶಂಕರಿ ದೇವಿ ಭಕ್ತರು ಹಾಗೂ ಸಾರ್ವಜನಿಕರು ಪರದಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.