ಕಮತಗಿ(ಅಮೀನಗಡ): ಕಮತಗಿ ಪಟ್ಟಣಕ್ಕೆ ₹5 ಕೋಟಿ ಅನುದಾನಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡು ಪಟ್ಟಣದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ಪೌರಾಡಳಿತ ಇಲಾಖೆ, ಜಿಲ್ಲಾಡಳಿತ ಹಾಗೂ ಕಮತಗಿ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಪಟ್ಟಣದಲ್ಲಿ ನಗರೋತ್ಥಾನ(ಮುನಿಸಿಪಾಲಿಟಿ-3)ರ ಯೋಜನೆ ಅಡಿ ₹ 5 ಕೋಟಿ ವೆಚ್ಚದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಪ್ರತಿ ವರ್ಷ ಪಟ್ಟಣ ಪಂಚಾಯಿತಿಗೆ ₹56 ಲಕ್ಷ ಅಭಿವೃದ್ಧಿಗಾಗಿ ನೀಡಲಾಗುತ್ತಿದೆ. ಈ ಉದ್ದೇಶದಿಂದಲೇ ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ ರಚನೆ ಮಾಡಲಾಗಿದೆ. ನಗರೋತ್ಥಾನದ ಅಡಿಯಲ್ಲಿ ಕಮತಗಿ ಭಾಗದಲ್ಲಿ ₹25 ಕೋಟಿ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆ, ಚರಂಡಿ, ಸಮುದಾಯ ಭವನ, ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನೇಕ ಜನಪರ ಯೋಜನೆಗಳು ಜನರಿಗೆ ತಲುಪಿವೆ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಅಂಗಡಿ ಮಾತನಾಡಿ ‘ಕಮತಗಿ ಪಟ್ಟಣವು ಬೆಂಗಳೂರು ನಗರದಂತೆ ಸುಂದರವಾಗಿದೆ. ಇದರಲ್ಲಿ ಶಾಸಕ ಮೇಟಿ ಶ್ರಮ ಸಾಕಷ್ಟಿದೆ. ಪಟ್ಟಣದಲ್ಲಿ ನೀರಿನ ಕೊರತೆಯಾಗದಂತೆ 11 ಬೋರವೆಲ್ ನಿರ್ಮಾಣ ಮಾಡಲಾಗಿದೆ’ಎಂದರು.
ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ಕಾರ್ಯಕ್ರಮದಿಂದ ದೂರು ಉಳಿದಿರುವುದು ಕಂಡು ಬಂತು. ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಭಾಶಚಂದ್ರ ಗೌಡರ, ಪಟ್ಟಣ ಪಂಚಾಯಿತಿ ಸದಸ್ಯರಾದ ಹುಚ್ಚಪ್ಪ ಸಿಂಹಾಸನ, ರುಕ್ಮವ್ವ ಹೋಟಿ, ರಮೇಶ ಲಮಾಣಿ, ಗಂಗವ್ವ ಲಮಾಣ, ಮೈಬೂಬ್ ಡಲಾಯತ್, ಸಿದ್ಲಿಂಗಪ್ಪ ಹೊಸಮನಿ, ಅನಿಲಕುಮಾರ ಹುಚ್ಚೇಶ್ವರಮಠ, ರತ್ನಾ ಹಳ್ಳದ, ಯಲ್ಲಪ್ಪ ಮಾದರ, ರಮೇಶ ಜಮಖಂಡಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.