ADVERTISEMENT

ಅಜಯಕುಮಾರ ಸರನಾಯಕ ಅಧ್ಯಕ್ಷ, ಮುರುಗೇಶ ಕಡ್ಲಿಮಟ್ಟಿ ಉಪಾಧ್ಯಕ್ಷ

ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಬಾಗಲಕೋಟೆ ಡಿಸಿಸಿ ಬ್ಯಾಂಕ್ ಆಡಳಿತ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 7:04 IST
Last Updated 27 ನವೆಂಬರ್ 2020, 7:04 IST
ಮಂಗಳೂರು ನಗರದ ಅಪಾರ್ಟ್‌ಮೆಂಟ್‌‌‌ ಒಂದರ ಕೌಂಪೌಂಡ್‌‌‌ ಮೇಲೆ  'ಲಷ್ಕರ್‌‌ ಜಿಂದಾಬಾದ್' ಎಂದು ಬರೆದಿರುವುದನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಬಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಗಳೂರು ನಗರದ ಅಪಾರ್ಟ್‌ಮೆಂಟ್‌‌‌ ಒಂದರ ಕೌಂಪೌಂಡ್‌‌‌ ಮೇಲೆ 'ಲಷ್ಕರ್‌‌ ಜಿಂದಾಬಾದ್' ಎಂದು ಬರೆದಿರುವುದನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಬಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮತ್ತೆ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಮರಳಿದೆ. ಫಲಿತಾಂಶ ಶುಕ್ರವಾರ ಪ್ರಕಟವಾಯಿತು.

ಬ್ಯಾಂಕಿನ ಅಧ್ಯಕ್ಷರಾಗಿ ಮಾಜಿ ಸಚಿವ ಅಜಯಕುಮಾರ ಸರನಾಯಕ ಸತತ ಮೂರನೇ ಅವಧಿಗೆ ಆಯ್ಕೆಯಾದರು. ಉಪಾಧಕ್ಷರಾಗಿ ಮುರುಗೇಶ ಕಡ್ಲಿಮಟ್ಟಿ ಆಯ್ಕೆಯಾದರು.

ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕುಮಾರಗೌಡ ಜನಾಲಿ ವಿರುದ್ಧ ಅಜಯಕುಮಾರ ಸರನಾಯಕ ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುರುಗೇಶ ಕಡ್ಡಿಮಟ್ಟಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಕಾಶ ತಪಶೆಟ್ಟಿ ವಿರುದ್ಧ 8-6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ADVERTISEMENT

ಮುರುಗೇಶ ಕಡ್ಲಿಮಟ್ಟಿ ಇದೇ ಮೊದಲ ಬಾರಿಗೆ ಕಮತಗಿ ಪಿಕೆಪಿಎಸ್ ಪ್ರತಿನಿಧಿಯಾಗಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯನ್ನು ಪ್ರವೇಶಿಸಿದ್ದರು.

13 ನಿರ್ದೇಶಕರ ಬಲದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನವೆಂಬರ್ 5 ರಂದು ಚುನಾವಣೆ ನಡೆದಿತ್ತು. ಈ ವೇಳೆ ಬಿಜೆಪಿ ಬೆಂಬಲಿತ ಏಳು ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಆರು ಮಂದಿ ನಿರ್ದೇಶಕರು ಆಯ್ಕೆಯಾಗಿದ್ದರು. ಒಬ್ಬರು ಸಹಕಾರ ಸಂಘಗಳ ಉಪನಿಬಂಧಕರ ಮತ ಸೇರಿದಂತೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ 14 ಮಂದಿ ಮತ ಚಲಾಯಿಸಲು ಅರ್ಹತೆ ಹೊಂದಿದ್ದರು.

ಅಡ್ಡ ಮತದಾನದ ಒಳ ಏಟು: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವಕಾಶ ಸಿಗದ ಕಾರಣ ಮತದಾನದಿಂದ ದೂರ ಉಳಿದಿದ್ದರು. ಇದರಿಂದ ಪಕ್ಷದ ಬೆಂಬಲಿಗರಿಗೆ ಗೆಲುವು ಸುಲಭ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ ಸ್ವಪಕ್ಷದ ಸದಸ್ಯರ ಅಡ್ಡಮತದಾನದ ಒಳ ಏಟು ಕಾಂಗ್ರೆಸ್ ಬೆಂಬಲಿತರ ಆಯ್ಕೆಗೆ ನೆರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷ ರಾಜಕಾರಣ ಇರುವುದಿಲ್ಲ. ಇದು ಸಹಕಾರಿ ಕ್ಷೇತ್ರ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವೆ ಎಂದು ಅಜಯಕುಮಾರ ಸರನಾಯಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.