ಬಾಗಲಕೋಟೆ: ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ರಾಘವೇಂದ್ರ ಔರಾದ್ಕರ್ ಸಮಿತಿ ನೀಡಿರುವ ವರದಿಯ ಶಿಫಾರಸುಗಳನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವಂತೆ ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯಿಂದ ಜನವರಿ 28ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ದ್ಯಾಮನ್ನವರ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಔರಾದ್ಕರ್ ವರದಿ ಜಾರಿಗೆ ಸಂಬಂಧಿಸಿದಂತೆ ಪೊಲೀಸ್ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿತ್ತು. ಆದರೆ ಸರ್ಕಾರದ ಮೌನ ಪೊಲೀಸರಲ್ಲಿ ಬೇಗುದಿ ಹೆಚ್ಚಿಸಿದೆ ಎಂದರು.
ಹಗಲು–ರಾತ್ರಿ ಚಳಿ, ಮಳೆ, ಬಿಸಿಲು ಎನ್ನದೇ ಸಮಾಜ ವಿರೋಧಿ ಶಕ್ತಿಗಳೊಂದಿಗೆ ಸಂಘರ್ಷದ ಬದುಕು ನಡೆಸುತ್ತಿರುವ ಪೊಲೀಸರನ್ನು ರಾಜ್ಯ ಸರ್ಕಾರ ಉಳಿದ ಇಲಾಖೆಗಳ ನೌಕರರ ಸಂಬಳ, ಸಾರಿಗೆ, ಸೌಲಭ್ಯಗಳೊಡನೆ ಸಮೀಕರಿಸುವುದು ಎಷ್ಟು ನ್ಯಾಯೋಚಿತ ಎಂದು ಪ್ರಶ್ನಿಸಿದ ದ್ಯಾಮನವ್ನವರ, ಇದೇ ವ್ಯವಸ್ಥೆ ಮುಂದುವರೆಸುವುದಾಗಿದ್ದರೆ ಔರಾದ್ಕರ್ ಸಮಿತಿ ರಚಿಸುವ ಔಚಿತ್ಯವೇನಿತ್ತು ಎಂದರು.
ತೆಲಂಗಾಣ, ಪಂಜಾಬ್, ಕೇರಳ ರಾಜ್ಯಗಳಲ್ಲಿ ಪೊಲೀಸರಿಗೆ ನೀಡುವ ವೇತನ ಶ್ರೇಣಿಯನ್ನು ಇಲ್ಲಿಯೂ ಕೊಡಲಿ ಇಲ್ಲದಿದ್ದರೆ ಔರಾದ್ಕರ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುರಸಿದ್ದ ಬಾಳೆಕುಂದ್ರಿ, ಲಕ್ಷ್ಮಣ ಮಸಗುಪ್ಪಿ, ಹಣಮಂತ ನಾಯ್ಕರ, ಪ್ರಕಾಶ ಇಜೇರಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.