ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬಾದಾಮಿ: ತಾಲ್ಲೂಕಿನ ಮಲಪ್ರಭಾ ನದಿಯಿಂದ ಶಿವಯೋಗಮಂದಿರ ಕೂಡು ರಸ್ತೆಗೆ ತಡೆಗೋಡೆ ನಿರ್ಮಿಸುವುದು ಬೇಡ. ಕಾಲಂ ನಿರ್ಮಿಸಿ, ರಸ್ತೆ ಕಾಮಗಾರಿ ನಡೆಸಲು ರೈತರ ವಿರೋಧವಿಲ್ಲ’ ಎಂದು ಚೊಳಚಗುಡ್ಡ ಮತ್ತು ನಾಗರಾಳ ಗ್ರಾಮದ ರೈತರು ಪ್ರತಿಭಟಿಸಿದರು.
ರಾಷ್ಟ್ರೀಯ ಹೆದ್ದಾರಿ 367 ಬಾಣಾಪುರ-ಗದ್ದನಕೇರಿ ರಸ್ತೆಯು ಹಿರೇಸನಬಿ ಗ್ರಾಮದ ಸಮೀಪ ಮಲಪ್ರಭಾ ನದಿಯಿಂದ ಶಿವಯೋಗಮಂದಿರ ಕೂಡು ರಸ್ತೆಯ ಕಾಮಗಾರಿ ವೀಕ್ಷಿಸಲು ರೈತರು ಈಚೆಗೆ ಹೋದಾಗ ಸ್ಥಳದಲ್ಲಿಯೇ ಪ್ರತಿಭಟಿಸಿದರು.
‘ರೈತರು ತಡೆಗೋಡೆ ಕಾಮಗಾರಿಯನ್ನು ಬಂದ್ ಇರಿಸಿದ್ದೇವೆ. ನದಿಯಲ್ಲಿ ನಾಲ್ಕು ಕಾಲಂ ನಿಲ್ಲಿಸಲಾಗಿದೆ. ಇದೇ ರೀತಿ ಶಿವಯೋಗಮಂದಿರ ರಸ್ತೆಯ ವರೆಗೆ ಕಾಲಂಗಳನ್ನು ನಿರ್ಮಿಸಿ, ರೈತರ ಜಮೀನು ಮತ್ತು ನದಿ ದಂಡೆಯ ಹಳ್ಳಿಗಳನ್ನು ಉಳಿಸಬೇಕು‘ ಎಂದು ನಾಗರಾಳ ಗ್ರಾಮದ ರೈತ ಅಶೋಕ ಗಂಗಲ ಒತ್ತಾಯಿಸಿದರು.
‘ರಸ್ತೆಗೆ ಅಡ್ಡಗೋಡೆಯಿಂದ ಅಧಿಕ ಗ್ರಾಮಗಳು ಜಲಾವೃತವಾಗುತ್ತವೆ. ಸಾವಿರಾರು ಎಕರೆ ಪ್ರದೇಶದಲ್ಲಿ ನೀರು ನಿಲ್ಲುವುದರಿಂದ ಭೂಮಿ ಸವಳಾಗುತ್ತದೆ. ರಸ್ತೆ ಎತ್ತರವಾಗುವುದರಿಂದ ರೈತರು ಬೆಳೆದ ಬೆಳೆಯನ್ನು ಸಾಗಿಸುವುದು ಹೇಗೆ ಎಂಬುದು ರೈತರಿಗೆ ಚಿಂತೆ ಉಂಟು ಮಾಡಿದೆ’ ಎಂದು ರೈತ ಬಸವರಾಜ ಅಂಬಿಗೇರ ಹೇಳಿದರು.
ಗ್ರಾಮಗಳಿಗೆ ಮತ್ತು ರೈತರಿಗೆ ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಂಸದ ಪಿ.ಸಿ. ಗದ್ದಿಗೌಡರ ಮತ್ತು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಸ್ಥಳಕ್ಕೆ ಬಂದು ವೀಕ್ಷಿಸಿದರೆ ರೈತರ ಮತ್ತು ಗ್ರಾಮಗಳ ತೊಂದರೆ ಏನು ಎಂಬುದು ಗೊತ್ತಾಗುತ್ತದೆ. ಇದುವರೆಗೂ ಯಾರೂ ಸ್ಥಳ ವೀಕ್ಷಣೆ ಮಾಡಿಲ್ಲ ಎಂದು ರೈತರು ದೂರಿದರು.
‘ಹೆದ್ದಾರಿ ರಸ್ತೆ ತಡೆಗೋಡೆ ಕಾಮಗಾರಿಯನ್ನು ರೈತರು ಸ್ಥಗಿತ ಮಾಡಿಸಿದ್ದಾರೆ. ಸಂಬಂಧಿಸಿದ ಎಂಜಿನಿಯರ್ಗೆ ತಿಳಿಸಿರುವೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಡಿಪಿಆರ್ ಪ್ರಕಾರ ಮಾಡುತ್ತಿದ್ದೇವೆ. ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದರೆ ರೈತರ ಬೇಡಿಕೆಯಂತೆ ಕಾಲಂ ನಿರ್ಮಿಸಲಾಗುವುದು’ ಎಂದು ಕಾಮಗಾರಿಯ ಗುತ್ತಿಗೆದಾರ ಸ್ವಾಗತ ಪವಾರ ಪ್ರತಿಕ್ರಿಯಿಸಿದರು.
ರೈತ ವೀರಣ್ಣ ಕಲ್ಲನ್ನವ, ಆನಂದ ಗಡ್ಡಿ, ಬಸಯ್ಯ ಹಂಪಿಹೊಳಿಮಠ, ಅಮೀನ್ ನಾಯಕ, ಶಂಕ್ರಪ್ಪ ಕಟ್ಟಿಮನಿ, ಈರಯ್ಯ ಗಣಾಚಾರಿ, ಈರಪ್ಪ ಗಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.