
ಬಾದಾಮಿ: ಸಮೀಪದ ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯಕ್ಷೇತ್ರವಾದ ಮಹಾಕೂಟೇಶ್ವರ ಮತ್ತು ಶಿವಯೋಗಮಂದಿರಲ್ಲಿ ನಿರ್ಮಿಸಿದ ಯಾತ್ರಿ ನಿವಾಸ ಮತ್ತು ಅತಿಥಿಗೃಹಗಳು ಬೀಗ ಹಾಕಿದ್ದು, ಯಾರಿಗೂ ಉಪಯೋಗಕ್ಕೆ ಬಾರದಂತಾಗಿವೆ.
ಮಹಾಕೂಟೇಶ್ವರ ದೇವಾಲಯದ ಸಮೀಪ 10 ವರ್ಷಗಳ ಹಿಂದೆಯೇ ಯಾತ್ರಿ ನಿವಾಸ ಕಟ್ಟಡಕ್ಕೆ ಅಂದಾಜು ₹2 ಕೋಟಿ ವೆಚ್ಚದ ಎಂಟು ಕೊಠಡಿಗಳನ್ನು ಮತ್ತು ಶಿವಯೋಗಮಂದಿರದಲ್ಲಿ 8 ವಿ.ಐ.ಪಿ ವಸತಿ ಕೊಠಡಿಗಳನ್ನು 2021ರಲ್ಲಿಯೇ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿದೆ.
ಶಿವಯೋಗಮಂದಿರದ ಬಳಿ ಅಂದಾಜು ₹1 ಕೋಟಿ ಮೊತ್ತದಲ್ಲಿ ನಿರ್ಮಿಸಿದ ಅತಿಥಿಗೃಹವನ್ನು ಜುಲೈ 2021ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಚಿವ ಗೋವಿಂದ ಕಾರಜೋಳ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು.
‘ಶಿವಯೋಗಮಂದಿರದಲ್ಲಿ ನಿರ್ಮಿಸಿದ ವಿಐಪಿ ವಸತಿ ಗೃಹಕ್ಕೆ ಹಾಕಿದ ಬೀಗ ಮುರಿದಿದೆ. ಯಾರು ಬೇಕಾದರೂ ಒಳಗೆ ಹೋಗಬಹುದಾಗಿದೆ. ಇಲ್ಲಿ ಕಾವಲುಗಾರರೂ ಇಲ್ಲ. ವಸತಿ ಗೃಹಕ್ಕೆ ನೀರು ಪೂರೈಕೆ ಇಲ್ಲದ್ದರಿಂದ ಯಾರೂ ಬಂದಿಲ್ಲ’ ಎಂದು ಸಾರ್ವಜನಿಕರು ಆರೋಪಿಸಿದರು.
ವಿಐಪಿ ಕೊಠಡಿಯಲ್ಲಿ ಲಕ್ಷಾಂತರ ಮೌಲ್ಯದ ಫರ್ನಿಚರ್, ಹಾಸಿಗೆ, ಹೊದಿಕೆಗಳು ಬಳಸದೇ ಹಾಗೇ ಬಿದ್ದಿವೆ. ಕೊಠಡಿಗಳು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕೊಠಡಿಗಳಲ್ಲಿ ಆಗಾಗ ಹಾವು, ಚೇಳುಗಳು ಕಾಣಿಸಿಕೊಳ್ಳುತ್ತವೆ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ವಸತಿ ಕಟ್ಟಡಗಳು ಉಪಯೋಗಕ್ಕೆ ಬಾರದಂತಾಗಿದೆ.
‘ಸರ್ಕಾರದ ಅನುದಾನದಿಂದ ನಿರ್ಮಿಸಿದ ಕಟ್ಟಡಗಳು ಲೋಕೋಪಯೋಗಿ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದೇ ಮಹಾಕೂಟದ ಯಾತ್ರಿ ನಿವಾಸ ಮತ್ತು ಶಿವಯೋಗಮಂದಿರದಲ್ಲಿ ನಿರ್ಮಿಸಿದ ವಿಐಪಿ ಕೊಠಡಿಗಳ ಪ್ರವಾಸಿ ಮಂದಿರ ಭೂತಬಂಗಲೆಗಳಾಗಿವೆ’ ಎಂದು ಸ್ಥಳೀಯರಾದ ಮಹಾಗುಂಡಪ್ಪ ಆರೋಪಿಸಿದರು.
‘ಶಿವಯೋಗಮಂದಿರ ಮತ್ತು ಮಹಾಕೂಟಕ್ಕೆ ಅನೇಕ ಪ್ರವಾಸಿಗರು ಮತ್ತು ಭಕ್ತರು ಬರುವರು. ಪ್ರವಾಸಿ ಮಂದಿರಕ್ಕೆ ನೀರಿನ ಸೌಲಭ್ಯ ಕಲ್ಪಿಸಿ, ಕಾಯಂ ನೌಕರರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.
ಈ ಕುರಿತು ಲೋಕೋಪಯೋಗಿ ಇಲಾಖೆಯನ್ನು ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ಸಿಗಲಿಲ್ಲ.
ಶಿವಯೋಗಮಂದಿರ ಮತ್ತು ಮಹಾಕೂಟ ಪ್ರವಾಸಿ ಮಂದಿರದಲ್ಲಿ ಇಬ್ಬರು ಕಾವಲುಗಾರರನ್ನು ನೇಮಿಸಲಾಗಿದೆ.ರಾಜು ಮ್ಯಾನೇಜರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.