ADVERTISEMENT

ಬಾಗಲಕೋಟೆ ಜಿ.ಪಂ ವಿವಿಧ ಸ್ಥಾಯಿ ಸಮಿತಿಗಳಿಗೆ ಆಯ್ಕೆ: ಕಾಂಗ್ರೆಸ್‌ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 10:09 IST
Last Updated 17 ಡಿಸೆಂಬರ್ 2019, 10:09 IST
ಬಾಗಲಕೋಟೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ ವಿವಿಧ ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಹಾಗೂ ಶಾಸಕ ಆನಂದ ನ್ಯಾಮಗೌಡ ಮತ ಚಲಾವಣೆ ಮಾಡಿದರು
ಬಾಗಲಕೋಟೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ ವಿವಿಧ ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಹಾಗೂ ಶಾಸಕ ಆನಂದ ನ್ಯಾಮಗೌಡ ಮತ ಚಲಾವಣೆ ಮಾಡಿದರು   

ಬಾಗಲಕೋಟೆ: ಇಲ್ಲಿನ ಜಿಲ್ಲಾ ಪಂಚಾಯ್ತಿ ವಿವಿಧ ಸ್ಥಾಯಿ ಸಮಿತಿಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧಿಕಾರರೂಢ ಕಾಂಗ್ರೆಸ್ ಪಕ್ಷ ಪಾರಮ್ಯ ಮೆರೆಯಿತು. ಐದು ಸಮಿತಿಗಳ ಪೈಕಿ ಒಂದಕ್ಕೆ ಅವಿರೋಧ ಆಯ್ಕೆ ನಡೆದರೆ, ಉಳಿದ ನಾಲ್ಕು ಸಮಿತಿಗಳಿಗೆ ಚುನಾವಣೆ ನಡೆಯಿತು.

ಹಣಕಾಸು ಮತ್ತು ಲೆಕ್ಕಪರಿಶೋಧನೆ ಸಮಿತಿಗೆ ಸದಸ್ಯರ ಅವಿರೋಧ ಆಯ್ಕೆ ನಡೆದಿದ್ದು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅಧ್ಯಕ್ಷರಾದರು.ಸಾಮಾನ್ಯ ಸ್ಥಾಯಿ ಸಮಿತಿಗೆ ಸದಸ್ಯರು ಚುನಾವಣೆ ಮೂಲಕ ಆಯ್ಕೆಯಾದರೂ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಕುಂದರಗಿ ಕ್ಷೇತ್ರದ ಸದಸ್ಯ ಬಸವರಾಜ ಖೋತ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಬಾದಾಮಿ ತಾಲ್ಲೂಕಿನ ಹಂಗರಗಿ ಕ್ಷೇತ್ರದ ಸರಸ್ವತಿ ಮೇಟಿ ಹಾಗೂ ಸಾಮಾಜಿಕ ನ್ಯಾಯ ಸಮಿತಿಗೆ ಲೋಕಾಪುರ ಕ್ಷೇತ್ರದ ಸದಸ್ಯ ಮಹಾಂತೇಶ ಉದಪುಡಿ ಅಧ್ಯಕ್ಷರಾಗಿ ಆಯ್ಕೆಯಾದರು.

ADVERTISEMENT

ಅವಿರೋಧ ಆಯ್ಕೆ: ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದೆ. ಈ ಸಮಿತಿಗೆ 6 ಸದಸ್ಯ ಸ್ಥಾನಕ್ಕೆ 9 ನಾಮಪತ್ರಗಳು ಬಂದಿದ್ದು, ಈ ಪೈಕಿ ಮೂವರು ನಾಮಪತ್ರ ಹಿಂಪಡೆದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಾಮಾನ್ಯ ಸ್ಥಾಯಿ ಸಮಿತಿ: ಸಾಮಾನ್ಯ ಸ್ಥಾಯಿ ಸಮಿತಿ 6 ಸದಸ್ಯ ಸ್ಥಾನಕ್ಕೆ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಬ್ಬರು ನಾಮಪತ್ರ ಹಿಂಪಡೆದ ಕಾರಣ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಶೋಭಾ ಬಿರಾದಾರ 27, ಮಗಿಯಪ್ಪ ದೇವನಾಳ 29, ಕಸ್ತೂರಿ ಜಾಧವ 30, ಚಂದವ್ವ ಓಲೇಕಾರ 30, ವೀರೇಶ ಉಂಡೋಡಿ 29, ಕವಿತಾ ತಿಮ್ಮಾಪುರ 30 ಮತಗಳ ಪಡೆದು ಆಯ್ಕೆಯಾದರು. ಬಿಜೆಪಿಯ ರತ್ನವ್ವ ತಳೇವಾಡ ಮೂರು ಮತಗಳ ಪಡೆದು ಸೋಲುಂಡರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಏಳು ಸ್ಥಾನಕ್ಕೆ 14 ನಾಮಪತ್ರ ಸಲ್ಲಿಕೆಯಾಗಿದ್ದವು. ಇಂದ್ರವ್ವ ನಾಯ್ಕರ 27 ಮತಗಳನ್ನು ಪಡೆದರೆ ಮುಗಿಯಪ್ಪ ದೇವನಾಳ 27, ಹಣಮಂತ ಕಾಖಂಡಕಿ 26, ಬಸವರಾಜ ಖೋತ 27, ಕಸ್ತೂರಿ ಲಿಂಗಣ್ಣವರ 26, ರೇಣುಕಾ ಮಲಘಾಣ 27, ಸುಜಾತಾ ಸಿಂಗಾಡಿ 27 ಮತಗಳನ್ನು ಪಡೆದು ಆಯ್ಕೆಯಾದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ: ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಏಳು ಸ್ಥಾನಕ್ಕೆ 14 ನಾಮಪತ್ರ ಸಲ್ಲಿಕೆಯಾಗಿದ್ದು, ಇಂದ್ರವ್ವ ನಾಯ್ಕರ 29, ಸರಸ್ವತಿ ಮೇಟಿ 30, ಕವಿತಾ ದಡ್ಡಿ 28, ಹನಮವ್ವ ಕರಿಹೊಳಿ 30, ಚಂದವ್ವ ಓಲೇಕಾರ 30, ಸಾಯವ್ವ ದಳವಾಯಿ 28, ರತ್ನಾ ತಳೇವಾಡ 25 ಮತಗಳ ಪಡೆದು ಆಯ್ಕೆಯಾದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಸಾಮಾಜಿಕ ಸ್ಥಾಯಿ ಸಮಿತಿಯ ಏಳು ಸ್ಥಾನಕ್ಕೆ 16 ಮಂದಿ ನಾಮಪತ್ರ ಸಲ್ಲಿಸಿದ್ದು, ಒಬ್ಬರು ಹಿಂಪಡೆದಿದ್ದರು. ಶರಣಬಸಪ್ಪ ಹಂಚಿನಮನಿ 29, ಶೋಭಾ ಬಿರಾದಾರ 25, ಸಾಯವ್ವ ದಳವಾಯಿ 27, ಲಲಿತಾ ನಂದಪ್ಪನವರ 28, ಜಯಶ್ರೀ ಶರ್ಮಾ 25, ಮಹಾಂತೇಶ ಉದಪುಡಿ 28, ಕವಿತಾ ತಿಮ್ಮಾಪುರ 28 ಮತಗಳ ಪಡೆದು ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಜಿಲ್ಲಾ ಪಂಚಾಯ್ತಿ ಸಿಇಒ ಗಂಗೂಬಾಯಿ ಮೇಟಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.