ಬಾಗಲಕೋಟೆ: ‘ದಯವೇ ಬೇಕು ಸಕಲ ಧರ್ಮಗಳಲ್ಲಿ ದಯವಿಲ್ಲದ ಧರ್ಮ ಯಾವುದಯ್ಯ ಎಂದು ವಿಶ್ವಮಾನವ ಬಸವಣ್ಣ ಹೇಳಿದ್ದಾರೆ. ಅವರು ಹೇಳಿರುವುದನ್ನು ಮರೆತು ಬಿಟ್ಟಿದ್ದೇವೆ. ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ ಮಾಡಬಾರದು’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕಕುಮಾರ್ ಸಲಹೆ ಮಾಡಿದರು.
ಜಿಲ್ಲೆಯ ಕೆರೂರು ಗಲಭೆಯಲ್ಲಿ ಗಾಯಗೊಂಡಿರುವ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಅರುಣ ಕಟ್ಟಿಮನಿ ಅವರನ್ನು ಬಾಗಲಕೋಟೆಯ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಅವರು, ‘ಬಸವಣ್ಣನ ನಾಡಿನಲ್ಲಿ ಇಂತಹ ಘಟನೆ ನಡೆದಿರುವುದು ವಿಷಾದನೀಯ. ನಾವು ಧರ್ಮ, ಧರ್ಮ ಎಂದು ಹೊಡೆದಾಟ ಮಾಡುತ್ತೇವೆ. ಇವರಿಗೆ ಹೊಡೆಯಬೇಕು, ಅವರಿಗೆ ಹೊಡೆಯಬೇಕು. ನಮ್ಮ ಬಾವುಟ ಮೇಲಿರಬೇಕು. ನಮ್ಮ ಬಾವುಟ ಮೇಲಿರಬೇಕು ಎಂಬುದೇ ಈಗ ಧರ್ಮ ಆಗಿದೆ. ಧರ್ಮದ ಮೂಲ ಎಲ್ಲಿ ಹೋಯಿತು? ಬಸವಣ್ಣ ಏನು ಹೆಳಿದ್ದಾರೆ ಗೊತ್ತಾ’ ಎಂದು ಪ್ರಶ್ನಿಸಿದರು.
‘ನಮ್ಮದು ಧರ್ಮ ಇಲ್ಲವೇ? ಎಲ್ಲರಿಗೂ ಧರ್ಮ ಇದೆ. ಎಲ್ಲರಿಗೂ ದೇವರ ಮೇಲೆ ಅಪಾರ ನಂಬಿಕೆ ಇದೆ. ಸಂವಿಧಾನದ ಪ್ರಕಾರ ಧರ್ಮದ ಪ್ರಚಾರ ಮಾಡಬೇಕು. ಯಾರ ಮೇಲೂ ಒತ್ತಡ ಹಾಕುವುದು, ಬಲವಂತ ಮಾಡಬೇಡಿ. ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ ಮಾಡಬಾರದು’ ಎಂದು ಹೇಳಿದರು.
‘ಮದುವೆ ಯಾಕೆ ಆಗಿಲ್ಲ. ಪೊಲೀಸರೇ ಮದುವೆ ಮಾಡಬೇಕೇ? ಎಂದು ಗಾಯಾಳುವಿಗೆ ಪ್ರಶ್ನಿಸಿದ ಅವರು, ಹೆಣ್ಣು ನೋಡಿರಿ ಎಂದು ಅಧಿಕಾರಿಗಳಿಗೆ ಹೇಳಿದರು. ಮಾತು ಮುಂದುವರಿಸಿ, ‘ಮದುವೆ ಆಗಬೇಕು. ಹಿಂದೆ ಯಾರಿಲ್ಲ, ಮುಂದೆ ಯಾರಿಲ್ಲ ಎಂದರೆ ಯೋಚನೆ ಮಾಡುವುದಿಲ್ಲ. ಮದುವೆಯಾದರೆ ಹೆಂಡತಿ, ಮಕ್ಕಳು ಇದ್ದಾರೆ. ನಮಗೆ ಹೆಚ್ಚು ಕಡಿಮೆಯಾದರೆ ಅವರನ್ನು ಯಾರೂ ನೋಡಿಕೊಳ್ಳುತ್ತಾರೆ ಎಂಬ ಯೋಚನೆ ಬರುತ್ತದೆ. ಪ್ರಪಂಚದಲ್ಲಿ ಸಮಸ್ಯೆಗಳು ಏನಿವೆ. ಸಂಬಂಧಗಳ ಬೆಲೆ ಗೊತ್ತಾಗುತ್ತದೆ. ಬೇಗ ಮದುವೆಯಾಗಲಿ. ದೇವರು ಒಳ್ಳೆಯದು ಮಾಡಲಿ’ ಎಂದು ಹಾರೈಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.