ಬಾದಾಮಿ: ಸಮೀಪದ ನೀಲಗುಂದ ಗ್ರಾಮದಲ್ಲಿ ಒಂದು ಕಾಲದಲ್ಲಿ ಹಲವಾರು ಬೆಲ್ಲದ ಗಾಣಗಳಿದ್ದವು. ಕ್ರಮೇಣ ಅವುಗಳೆಲ್ಲ ಮುಚ್ಚಿ ಹೋಗಿದ್ದವು. ಈಗ ರೈತರೊಬ್ಬರು ಸಾವಯವ ಬೆಲ್ಲ ತಯಾರಿಸುವ ಆಲೆಮನೆ ಆರಂಭಿಸಿದ್ದಾರೆ.
ತಾಲ್ಲೂಕಿನಲ್ಲಿ ಐದಾರು ದಶಕಗಳ ಹಿಂದೆ ನೀಲಗುಂದ ಮತ್ತು ಎಸ್.ಬಿ. ಯರಗೊಪ್ಪ ಗ್ರಾಮದ ರೈತರು ಕಬ್ಬಿನ ಬೆಳೆಯಿಂದ ಹೊಲದಲ್ಲಿಯೇ ಗಾಣದ ಮೂಲಕ ಬೆಲ್ಲ ತಯಾರಿಸಿ ಮಾರುಕಟ್ಟೆಗೆ ಕಳಿಸುತ್ತಿದ್ದರು.
ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳು ಆರಂಭವಾದ ಮೇಲೆ ಕಬ್ಬು ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿದೆ. ಆದರೆ, ಗಾಣ ಬಂದ್ ಮಾಡಲಾಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದು ಕಾರ್ಖಾನೆಗೆ ಸಾಗಿಸುತ್ತಿದ್ದಾರೆ.
ಕಬ್ಬನ್ನು ಕಾರ್ಖಾನೆಗೆ ಸಾಗಿಸದೆ ನಾವೇ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಬೇಕು. ಜನರಿಗೆ ಗುಣಮಟ್ಟದ ಬೆಲ್ಲ ಕೊಡಬೇಕು ಎಂದು ಯೋಚಿಸಿ ಬೆಲ್ಲ ತಯಾರಿಸುವ ಮಿನಿ ಆಲೆಮನೆಯನ್ನು ನೀಲಗುಂದ ಗ್ರಾಮದ ರೈತ ರಾಮಗಗೌಡ ತನ್ನ ಹೊಲದಲ್ಲಿಯೇ ಐದು ವರ್ಷಗಳ ಹಿಂದೆ ಆರಂಭಿಸಿದರು.
‘ಐದಾರು ದಶಕಗಳ ಹಿಂದೆ ನೀಲಗುಂದ ಗ್ರಾಮವೊಂದರಲ್ಲಿಯೇ ಹೊಲಗಳಲ್ಲಿ 8 ರಿಂದ 10 ಬೆಲ್ಲ ತಯಾರಿಸುವ ಆಲೆಮನೆಗಳು ಇದ್ದವು. ಸಕ್ಕರೆ ಕಾರ್ಖಾನೆ ಆರಂಭವಾದ ನಂತರ ಗಾಣ ಬಂದ್ ಆದವು. ಈಗ ಯಂತ್ರದ ಗಾಣದ ಮೂಲಕ ಸಾವಯವ ಬೆಲ್ಲ ತಯಾರಿಸುತ್ತಿದ್ದೇವೆ ’ ಎಂದು ರೈತ ರಾಮನಗೌಡ ಓದುಗೌಡ್ರ ಹೇಳಿದರು.
‘10 ಎಕರೆ ಕಬ್ಬನ್ನು ಬೆಳೆಯುತ್ತಿದ್ದೇವೆ. ಆರು ತಿಂಗಳು ಕಾಲ ದಿನಕ್ಕೆ 10 ಟನ್ ಕಬ್ಬನ್ನು ನುರಿಸಿದ ಹಾಲನ್ನು ಕಾಯಿಸಿ 100 ಕೆ.ಜಿ. ಬೆಲ್ಲ ಉತ್ಪಾದಿಸುತ್ತೇವೆ. ಒಂದು ಟನ್ ಕಬ್ಬಿಗೆ 10 ಕೆ.ಜಿ. ಬೆಲ್ಲ ಉತ್ಪಾದನೆಯಾಗುತ್ತದೆ. ಒಂದು, ಐದು ಹಾಗೂ ಹತ್ತು ಕೆ.ಜಿ. ಬೆಲ್ಲದ ಅಚ್ಚು ಪೆಂಟೆಗಳನ್ನು ತಯಾರಿಸಲಾಗುತ್ತದೆ’ ಎಂದರು.
‘ ಜಿಲ್ಲೆಯ ರೈತರು ಬೆಲ್ಲಕ್ಕಾಗಿ ಕಬ್ಬು ತೆಗೆದುಕೊಂಡು ಬರುತ್ತಾರೆ. ಒಂದು ಅಡಗಿಗೆ (ಕೊಪ್ಪರಿಗೆ) 2 ಟನ್ ಕಬ್ಬಿನ ಹಾಲು ತಯಾರಾಗುತ್ತದೆ. ಎರಡು ಟನ್ ಗೆ ₹4 ಸಾವಿರ ದರ ನಿಗದಿ ಮಾಡಿದ್ದೇವೆ’ ಹೇಳಿದರು.
‘ಆರು ತಿಂಗಳು ಕಾಲ ನಿತ್ಯ 10 ಜನರಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಸಹೋದರ ಮಹೇಶಗೌಡ ಹಾಗೂ ಪುತ್ರ ರವಿ ಸಹಕಾರದಿಂದ ಬೆಲ್ಲ ಉತ್ಪಾದಿಸಲು ಸಾಧ್ಯವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.