ADVERTISEMENT

ಬಾಗಲಕೋಟೆ: ಜಿಲ್ಲೆಯಲ್ಲಿ ಶೇ 67.40 ರಷ್ಟು ಬಿತ್ತನೆ

ಇಳಕಲ್‌, ಹುನಗುಂದ, ಬಾಗಲಕೋಟೆ ಭಾಗದಲ್ಲಿ ಈಗ ಬಿತ್ತನೆ ಚುರುಕು

ಬಸವರಾಜ ಹವಾಲ್ದಾರ
Published 4 ಆಗಸ್ಟ್ 2023, 6:27 IST
Last Updated 4 ಆಗಸ್ಟ್ 2023, 6:27 IST
ಮಳೆಯಾಗದ್ದರಿಂದ ಬಿತ್ತನೆಯಾಗದಿರುವ ಭೂಮಿ
ಮಳೆಯಾಗದ್ದರಿಂದ ಬಿತ್ತನೆಯಾಗದಿರುವ ಭೂಮಿ    

ಬಾಗಲಕೋಟೆ: ಮುಂಗಾರು ಮಳೆ ವಿಳಂಬವಾಗಿ ಬಂದಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. 2.65 ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿತ್ತು. ಆ ಪೈಕಿ 1.78 ಲಕ್ಷ ಹೆಕ್ಟೇರ್ (ಶೇ67.40ರಷ್ಟು) ಬಿತ್ತನೆಯಾಗಿದೆ. ಅದರಲ್ಲಿ 1.19 ಲಕ್ಷ ಹೆಕ್ಟೇರ್ ಕಬ್ಬು ಹೊರತುಪಡಿಸಿದರೆ, ಉಳಿದ ಬೆಳೆಗಳೆಲ್ಲ ಸೇರಿದರೂ ಕೇವಲ 59 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ.

ಜಿಲ್ಲೆಯ ಪ‍್ರಮುಖ ಬೆಳೆಯಾಗಿದ್ದ ಗೋವಿನ ಜೋಳ 42 ಸಾವಿರ್ ಹೆಕ್ಟೇರ್ ಗುರಿಯಲ್ಲಿ 25,904 ಹೆಕ್ಟೇರ್, ಸಜ್ಜೆಯ 30,250 ಹೆಕ್ಟೇರ್ ಗುರಿಯಲ್ಲಿ 7,244 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.

ಹೆಸರು ಕಾಳು ಬಿತ್ತನೆ ಗುರಿ 20,250 ಹೆಕ್ಟೇರ್ ಪೈಕಿ ಕೇವಲ 6,819 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಇದರ ಬಿತ್ತನೆಯ ಮಿತಿ ಮುಗಿದಿರುವುದರಿಂದ ಮುಂದಿನ ದಿನಗಳಲ್ಲಿ ಬಿತ್ತನೆ ಸಾಧ್ಯವಿಲ್ಲ.

ADVERTISEMENT

36,330 ಹೆಕ್ಟೇರ್ ಗುರಿ ಹೊಂದಿದ್ದ ತೊಗರಿ ಪೈಕಿ 12,374 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಇಲ್ಲಿಯವರೆಗೆ 24,550 ಹೆಕ್ಟೇರ್ ಗುರಿ ಹೊಂದಿದ್ದ ಸೂರ್ಯಕಾಂತಿಯಲ್ಲಿ ಕೇವಲ 4,320 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ 93,250 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುವ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 1.19 ಲಕ್ಷ ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. 

ಮಳೆ ಕೊರತೆಯಿಂದಾಗಿ ಜಮಖಂಡಿ, ರಬಕವಿ ಬನಹಟ್ಟಿ ಭಾಗದಲ್ಲಿ ಕಬ್ಬು ಬೆಳೆ ಹಾಳಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಳೆ ಸುರಿದಿದೆ. ಜತೆಗೆ ನದಿಗಳೂ ತುಂಬಿ ಹರಿಯುತ್ತಿರುವುದರಿಂದ ಕಬ್ಬು ಬೆಳೆಗಾರರ ಆತಂಕ ದೂರವಾಗಿದೆ.

ಮುಧೋಳ ತಾಲ್ಲೂಕಿನಲ್ಲಿ 33,697, ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ 18 ಸಾವಿರ, ಜಮಖಂಡಿ ತಾಲ್ಲೂಕಿನಲ್ಲಿ 27,500, ಬೀಳಗಿ ತಾಲ್ಲೂಕಿನಲ್ಲಿ 15,170 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.

ಮುಧೋಳ ತಾಲ್ಲೂಕಿನ 40,600 ಹೆಕ್ಟೇರ್ ಗುರಿಯಲ್ಲಿ 36,500 ಹೆಕ್ಟೇರ್, ರಬಕವಿ ಬನಹಟ್ಟಿಯಲ್ಲಿ 22,250 ಹೆಕ್ಟೇರ್ ಗುರಿಯಲ್ಲಿ 19,750 ಹೆಕ್ಟೇರ್, ಜಮಖಂಡಿಯ 30,277 ಗುರಿಯಲ್ಲಿ 22,250 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.

ಇಳಕಲ್‌ ತಾಲ್ಲೂಕಿನ 25,100 ಗುರಿಯಲ್ಲಿ ಕೇವಲ 6,705 ಹೆಕ್ಟೇರ್, ಹುನಗುಂದದ 27,275 ಗುರಿಯಲ್ಲಿ 6,535 ಹೆಕ್ಟೇರ್, ಬೀಳಗಿಯ 24,425 ಹೆಕ್ಟೇರ್‌ನಲ್ಲಿ 19,070 ಹೆಕ್ಟೇರ್, ಬಾಗಲಕೋಟೆಯ 25 ಸಾವಿರ ಹೆಕ್ಟೇರ್ ಗುರಿಯಲ್ಲಿ 13,455 ಹೆಕ್ಟೇರ್ ಬಿತ್ತನೆಯಾಗಿದೆ.

‘ಸರಿಯಾದ ಸಮಯದಲ್ಲಿ ಮಳೆಯಾಗದ್ದರಿಂದ ಬಿತ್ತನೆಯೇ ಸಾಧ್ಯವಾಗಿಲ್ಲ. ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಬಿತ್ತನೆ ಮಾಡಲಾಗಲಿಲ್ಲ’ ಎನ್ನುತ್ತಾರೆ ಕರಡಿಯ ಹನುಮಂತಪ್ಪ. ವಾರದ ಹಿಂದೆ ಉತ್ತಮ ಮಳೆಯಾಗಿರುವುದರಿಂದ ಗೋವಿನ ಜೋಳ, ತೊಗರಿ ಬಿತ್ತನೆ ಕಾರ್ಯ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.