ಜೈಲು (ಪ್ರಾತಿನಿಧಿಕ ಚಿತ್ರ)
ಬಾಗಲಕೋಟೆ: ಪತ್ನಿ ಶೀಲ ಶಂಕಿಸಿ ಕೊಲೆ ಮಾಡಲು ಯತ್ನಿಸಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ. ವಿಜಯ್, ಐದು ವರ್ಷ ಕಠಿಣ ಶಿಕ್ಷೆ, ₹5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ರಾಮದುರ್ಗ ತಾಲ್ಲೂಕಿನ ಕುನ್ನಾಳ ಗ್ರಾಮದ ಸುರೇಶ ಬಂಡಿವಡ್ಡರ ಶಿಕ್ಷಕೆಗೊಳಗಾದ ವ್ಯಕ್ತಿ. ಸುರೇಶ, ಗದ್ದನಕೇರಿ ಗ್ರಾಮದ ಭಾರತಿ ಎಂಬುವವರನ್ನು ವಿವಾಹವಾಗಿದ್ದನು. ಇಬ್ಬರು ಮಕ್ಕಳಾಗುವವರೆಗೆ ಚೆನ್ನಾಗಿಯೇ ಇದ್ದರು.
ಪತ್ನಿ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಹಲ್ಲೆ ಮಾಡುತ್ತಿದ್ದರಿಂದ ಭಾರತಿ ತವರು ಮನೆಯಲ್ಲಿಯೇ ಇದ್ದರು. ಗದ್ದನಕೇರಿಗೆ ಬಂದಿದ್ದ ಸುರೇಶ, ಎಲ್ಲ ಮರೆತು ಇರೋಣ. ಊರಿಗೆ ಹೋಗೋಣ ಬಾ ಎಂದು ಕರೆದನು. ಅದಕ್ಕೆ ಭಾರತಿ ನಿರಾಕರಿಸಿದ್ದರು.
ಇದರಿಂದ ಸಿಟ್ಟಿಗೆದ್ದ ಸುರೇಶ, ಕೊಡ್ಲಿಯಿಂದ ಭಾರತಿ ತಲೆಗೆ ಹೊಡೆದು ಗಾಯಗೊಳಿಸಿದ್ದನು. ಅಂದಿನ ತನಿಖಾಧಿಕಾರಿ ಯು.ಎಸ್. ರೆಡ್ಡಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ವಿ.ಬಿ. ಹೆಬಸೂರ ವಾದ ಮಂಡಿಸಿದ್ದರು.
ಹಣ ತರುವಂತೆ ಪತ್ನಿಗೆ ಪೀಡಿಸಿ, ಮರಣ ಹೊಂದುವಂತೆ ಮಾಡಿದ ಪತಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಮೇಶ ಏಕಬೋಟೆ, 10 ವರ್ಷ ಕಠಿಣ ಶಿಕ್ಷೆ, ₹15 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಬೀಳಗಿ ತಾಲ್ಲೂಕಿನ ತೊಳಮಟ್ಟಿ ಮಲ್ಲಿಕಾರ್ಜುನ ಶಿಕ್ಷೆಗೊಳಗಾದ ವ್ಯಕ್ತಿ. ಮಲ್ಲಿಕಾರ್ಜುನನಿಗೆ ಪೂಜಾ ಎಂಬುವವರನ್ನು 15 ತೊಲೆ ಬಂಗಾರ, 860 ಗ್ರಾಂ ಬೆಳ್ಳಿ ಆಭರಣ ನೀಡಿ ಮದುವೆ ಮಾಡಿ ಕೊಡಲಾಗಿತ್ತು. ನಂತರ ವ್ಯಾಪಾರ ಮಾಡಲು ₹20 ಲಕ್ಷ ತರುವಂತೆ ಪತ್ನಿಗೆ ಮಲ್ಲಿಕಾರ್ಜುನ ಕಿರುಕುಳ ನೀಡಿದ್ದರು.
ಕಿರುಕುಳದಿಂದ ಬೇಸತ್ತು ತವರು ಮನೆಗೆ ಬಂದಿದ್ದ ಮಗಳನ್ನು ತಂದೆ–ತಾಯಿ ಬುದ್ಧಿ ಹೇಳಿ, ಮನವೊಲಿಸಿ ಪತಿಯ ಮನೆಗೆ ಕಳುಹಿಸಿದ್ದರು. ಮತ್ತೇ ಹಣ ತರುವಂತೆ ನೀಡಿದ ಕಿರುಕುಳ ತಾಳದೇ ಮಾತ್ರೆ ತೆಗೆದುಕೊಂಡಿದ್ದರು. ಇದರಿಂದ ಹೃದಯ ಹಾಗೂ ಶ್ವಾಸಕೋಶಕ್ಕೆ ಹಾನಿಯಾಗಿ ಮೃತರಾಗಿದ್ದರು.
ಅಂದಿನ ತನಿಖಾಧಿಕಾರಿ ರಾಮನಗೌಡ ಹಟ್ಟಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರ ಪರವಾಗಿ ಅಭಿಯೋಜಕ ಎಸ್.ಎಂ. ಹಂಜಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.