ರಬಕವಿ ಬನಹಟ್ಟಿ: ಕೇವಲ ಅರ್ಧ ಎಕರೆ ಭೂ ಪ್ರದೇಶದಲ್ಲಿ 5531 ತಳಿಯ ಹಸಿಮೆಣಸಿಕಾಯಿ ಬೆಳೆದು, ಮುಂಬರುವ ನಾಲ್ಕು ತಿಂಗಳ ಕಾಲ ಅಧಿಕ ಇಳುವರಿಯ ಜೊತೆಗೆ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ರೈತ ಕೆರೆ ರಸ್ತೆಯ ರೈತರಾದ ಬಸವರಾಜ ಗುಂಡಿ.
ಅಂದಾಜು ಏಳೆಂಟು ತಿಂಗಳ ಬೆಳೆಯಾದ ಮೆಣಸಿನಕಾಯಿಯನ್ನು ನವೆಂಬರ್ ಮಧ್ಯದಲ್ಲಿ ನಾಟಿ ಮಾಡಿದ್ದಾರೆ. ಎರಡೂವರೆ ತಿಂಗಳ ನಂತರ ಗಿಡಗಳಲ್ಲಿ ಮೆಣಸಿಕಾಯಿ ಬರಲಾರಂಭಿಸಿವೆ. ಅಂದಾಜು ನಾಲ್ಕೂವರೆ ಸಾವಿರದಷ್ಟು ಸಸಿಗಳನ್ನು ನಾಟಿ ಮಾಡಿದ್ದಾರೆ. ಈಗಾಗಲೇ ಮೆಣಸಿನಕಾಯಿ ಬೆಳೆಯಲು ಮಾಡಿದ ಖರ್ಚಿನ ಜೊತೆಗೆ ಉತ್ತಮ ಲಾಭವನ್ನೂ ಪಡೆದುಕೊಂಡಿದ್ದಾರೆ.
‘ಬೆಳೆದ ಬೆಳೆಯನ್ನು ಚಿಕ್ಕ ಮಕ್ಕಳಂತೆ ಜೋಪಾನ ಮಾಡಿದರೆ, ಮುಂದಿನ ದಿನಗಳಲ್ಲಿ ಉತ್ತಮ ಇಳುವರಿ ಪಡೆದುಕೊಳ್ಳಬಹುದು. ಈಗ ಎರಡೂವರೆ ತಿಂಗಳಲ್ಲಿ ಸಾಕಷ್ಟು ಲಾಭ ಬಂದಿದೆ’ ಎನ್ನುತ್ತಾರೆ ಬಸವರಾಜ ಗುಂಡಿ.
ಜಗದಾಳ ಗ್ರಾಮದ ಪ್ರವಿರಾಜ ಶ್ರೀನಾಥ ಅಗ್ರಿ ಮಾಲ್ನ ಮಾರ್ಗದರ್ಶನದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದು, ಬದು ನಿರ್ಮಾಣ, ಮಲ್ಚಿಂಗ್ ಪೇಪರ್, ಹನಿ ನೀರಾವರಿ ಪೈಪ್ ಅಳವಡಿಕೆ, ಗೊಬ್ಬರ, ಔಷಧ, ಕೂಲಿ ಕಾರ್ಮಿಕರ ಕೂಲಿ ಸೇರಿದಂತೆ ಅಂದಾಜು ಇಲ್ಲಿವರೆಗೆ ₹1 ಲಕ್ಷದವರೆಗೆ ಖರ್ಚು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಳೆಯು ಅವರಿಗೆ ಉತ್ತಮ ಲಾಭ ತಂದು ಕೊಡಲಿದೆ.
‘ಜಮಖಂಡಿ, ಸಂಕೇಶ್ವರ ಹಾಗೂ ವಿಜಯಪುರ ಮಾರುಕಟ್ಟೆಗೆ ಮೆಣಸಿನಕಾಯಿಗಳನ್ನು ಕಳುಹಿಸಿಕೊಡುತ್ತೇವೆ. ಅಲ್ಲಿ ಉತ್ತಮ ಬೆಲೆ ಇದೆ. ಸದ್ಯ ಅಲ್ಲಿಯ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ ಮೆಣಸಿಕಾಯಿಗೆ ₹60 ರಿಂದ ₹70 ದರವಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.