ಕುಳಗೇರಿ ಕ್ರಾಸ್: ಸತತ ಮಳೆಯಾಗುತ್ತಿರುವುದರಿಂದ ಉಗಲವಾಟ–ಹಳಗೇರಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದ್ ಆಗಿದೆ.
ಮಳೆಗಾಲ ಬಂದರೆ ಈ ಗ್ರಾಮಗಳ ಜನರ ಹಾಗೂ ವಾಹನ ಸವಾರಿಗೆ ಪ್ರತಿ ವರ್ಷ ಇಂತಹ ಪರಿಸ್ಥಿತಿ ಎದುರಾಗುತ್ತದೆ.
ಉಗಲವಾಟ, ಹಳಗೇರಿ ಗ್ರಾಮಗಳ ಜಮೀನುಗಳಲ್ಲಿನ ಅಪಾರ ಪ್ರಮಾಣದ ನೀರು ಹರಿದು ಬಂದು ಈ ಸೇತುವೆ ಮುಳುಗಡೆಯಾಗುತ್ತದೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಸುತ್ತುವರೆದು ಗ್ರಾಮಗಳನ್ನು ತಲುಪುವ ಸ್ಥಿತಿ ಎದುರಾಗಿದೆ.
ಹಳಗೇರಿ–ಉಗಲವಾಟ ಮಾರ್ಗವಾಗಿ ಬಾದಾಮಿಗೆ ತೆರಳುವವರಿಗೆ ಹಳಗೇರಿ ಗ್ರಾಮದ ಮುಂಭಾಗದಲ್ಲಿರುವ ಸೇತುವೆ ಹಾಗೂ ಉಗಲವಾಟ ಗ್ರಾಮದ ಹೇಮ-ವೇಮ ಪ್ರೌಢ ಶಾಲೆಯ ಮುಂಭಾಗದಲ್ಲಿರುವ ಸೇತುವೆ ಮುಳುಗಡೆಯಾಗುತ್ತವೆ.
ಮಳೆಗಾಲ ಸಮಯದಲ್ಲಿ ಹಳಗೇರಿ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ಉಗಲವಾಟ ಗ್ರಾಮದಲ್ಲಿರುವ ಎರಡು ಪ್ರೌಢ ಶಾಲೆಗಳಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಾರೆ. ಮಳೆಗಾಲದಲ್ಲಿ ಇವರು ಶಾಲೆಗೆ ಹೋಗಲು ಪರದಾಡಬೇಕಿದೆ.
ಈ ಸೇತುವೆಗಳನ್ನು ಎತ್ತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ ಎಂದು ಮುಷ್ಟಿಗೇರಿ ಗ್ರಾಮದ ಸಿದ್ದಲಿಂಗಪ್ಪ ಘಟ್ಟಿ, ಹಳಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಾ ಸೀಮಿಕೇರಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.