ADVERTISEMENT

ಬಿಎಸ್‌ವೈ ಬಗ್ಗೆ ವೈಯಕ್ತಿಕ ಟೀಕೆ | ಎಚ್‌ಡಿಕೆಗೆ ಮತಿಭ್ರಮಣೆ: ಶ್ರೀರಾಮುಲು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 13:30 IST
Last Updated 20 ಸೆಪ್ಟೆಂಬರ್ 2019, 13:30 IST
   

ಬಾಗಲಕೋಟೆ: ‘ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ. ಅದೇ ಕಾರಣಕ್ಕೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಪತ್ನಿಯದು ಸಹಜ ಸಾವು ಅಲ್ಲ‘ ಎಂಬ ಕುಮಾರಸ್ವಾಮಿ ಹೇಳಿಕೆಗೆ ಶುಕ್ರವಾರ ಇಲ್ಲಿ ತಿರುಗೇಟು ನೀಡಿದ ಅವರು, ‘ಕುಮಾರಸ್ವಾಮಿ ಲಾಸ್ಟ್‌ಬೆಂಚ್ ಸ್ಟೂಡೆಂಟ್, ಸಣ್ಣ ರಾಜಕಾರಣಿ, ಮಾಜಿ ಪ್ರಧಾನಿ ಮಗ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಆದವರು. ಈಗ ಯಡಿಯೂರಪ್ಪ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಹೊಂದಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಿ ರಾಜ್ಯದಲ್ಲಿ ಕೆಟ್ಟ ಸಂಪ್ರದಾಯ ಹುಟ್ಟುಹಾಕಿಕೊಟ್ಟಿರುವ ಕುಮಾರಸ್ವಾಮಿ, ತಾವೊಬ್ಬ ಮಾಜಿ ಪ್ರಧಾನಿಯ ಮಗ ಎಂಬುದನ್ನು ಮರೆಯಬಾರದು‘ ಎಂದು ಕಿವಿಮಾತು ಹೇಳಿದರು.

‘ಕುಮಾರಸ್ವಾಮಿ ಅವರ ತಂದೆ ದೇವೇಗೌಡರಷ್ಟೇ ರಾಜಕೀಯ ಅನುಭವ ಯಡಿಯೂರಪ್ಪ ಹೋರಾಟದ ಮೂಲಕ ಸಿಎಂ ಆಗಿದ್ದಾರೆ. ಅವರ ಕುಟುಂಬದ ತಂಟೆಗೆ ಹೋಗುವ ಕೆಲಸ ಯಾವೊಬ್ಬ ರಾಜಕಾರಣಿಯೂ ಮಾಡಬಾರದು’ ಎಂದರು.

‘ಬಳ್ಳಾರಿ ಜಿಲ್ಲೆ ಅಖಂಡವಾಗಿರಲಿ ಎಂಬ ಕಾರಣಕ್ಕೆ ವಿಜಯನಗರ ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸಿರುವುದಾಗಿ‘ ಶ್ರೀರಾಮುಲು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.