ಮಹಾಲಿಂಗಪುರ: ಸಮೀಪದ ಕೆಸರಗೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಳಿರು ತೋರಣ, ಬಲೂನುಗಳಿಂದ ಸಿಂಗರಿಸಿ, ಸರಸ್ವತಿ ಪೂಜೆಯೊಂದಿಗೆ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಮಕ್ಕಳನ್ನು ಆರತಿ ಮಾಡಿ, ಹೂ ಗುಚ್ಛ ಮತ್ತು ಸಿಹಿ ನೀಡಿ ಸ್ವಾಗತಿಸಲಾಯಿತು. ಮಕ್ಕಳಿಗೆ ಅಕ್ಕಿ ತಟ್ಟೆಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು. ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡಲಾಯಿತು. ಮಕ್ಕಳು ವಿವಿಧ ವೇಷಭೂಷಣಗಳಲ್ಲಿ ಮಿಂಚಿದರು. ಇಳಕಲ್ ಸೀರೆ ಉಟ್ಟು ಅಕ್ಷರ ಕುಂಭ ಹೊತ್ತು ಊರಲ್ಲೆಲ್ಲ ಜಾಥಾದಲ್ಲಿ ಹೆಜ್ಜೆ ಹಾಕಿದರು.
ತೋಟಗಳಿಂದ ಮಕ್ಕಳನ್ನು ಶಾಲೆಗೆ ಕರೆತರಲು ತಂದ ವಾಹನಕ್ಕೆ ಎಸ್ಡಿಎಂಸಿ ಅಧ್ಯಕ್ಷ ಮುತ್ತು ಪೂಜಾರಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಮಾದರ, ರೇಖಾ ಸೋನಾರ, ಚನ್ನು ದೇಸಾಯಿ, ವಿಠ್ಠಲ ಢವಳೇಶ್ವರ, ಸದಾಶಿವ ಕುರಿ, ಸಂಜು ಸಾವಳಗಿ, ಶ್ರೀಶೈಲ ಗಣಿ, ರಾಜು ಕದಂ, ಮುಖ್ಯಶಿಕ್ಷಕ ಎಸ್.ಎನ್.ಬ್ಯಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.