ಬಾಗಲಕೋಟೆ: ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಸ್ಥಾನದ ಎದುರಿಗಿನ ಪುಷ್ಕರಣಿಯನ್ನು ಭಾನುವಾರ ರಾಜ್ಯ ವಿಪತ್ತು ನಿರ್ವಹಣಾ ಕೋಶ (ಎಸ್ಡಿಆರ್ಎಫ್) ಮತ್ತು ಜಿಲ್ಲೆಯೆ ಪೊಲೀಸರು ಸೇರಿ ಸ್ವಚ್ಛಗೊಳಿಸಿದರು. ಇದಕ್ಕೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಕೈ ಜೋಡಿಸಿದ್ದರು.
ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಪುಷ್ಕರಣಿ ಭರ್ತಿಯಾಗಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ಎಸೆದ ಪ್ಲಾಸ್ಟಿಕ್ ಕಸದಿಂದ ತುಂಬಿ ಕೊಳಚೆಯಾಗಿ ಮಾರ್ಪಾಡಾಗಿತ್ತು. ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿಸಲು ನಿರ್ಧರಿಸಿದ ಎಸ್ಪಿ ಎರಡೂ ವಿಭಾಗದ ಸಿಬ್ಬಂದಿಯನ್ನು ಕರೆತಂದು ಪುಷ್ಕರಣಿ ಸ್ವಚ್ಛಗೊಳಿಸಿದರು.
ಪೊಲೀಸ್ ಸಿಬ್ಬಂದಿ ಸಮಾಜದಲ್ಲಿನ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿಯಾದ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಯಿತು.ಈ ಕಾರ್ಯದಲ್ಲಿ ಡಿವೈಎಸ್ಪಿಗಳಾದ ಎಸ್.ಬಿ. ಗಿರೀಶ್, ರವೀಂದ್ರ ಶಿರೂರ ಹಾಗೂ ಬಾದಾಮಿ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.