ಗುಳೇದಗುಡ್ಡ: ‘ಕೋಟೆಕಲ್ ಪಿಕೆಪಿಎಸ್ನಿಂದ ತೋಗುಣಶಿ ಸಮೀಪದಲ್ಲಿ ನಿರ್ಮಿಸಲಾದ ಶೀತಲೀಕರಣ ಘಟಕದಲ್ಲಿ ಶೀಘ್ರದಲ್ಲಿಯೇ ಮೆಕ್ಕೆಜೋಳ ಸಂಗ್ರಹ ಕಾರ್ಯ ಆರಂಭವಾಗಲಿದೆ. ಕೃಷಿ ಸಾಲ ತೆಗೆದುಕೊಂಡ ರೈತರು, ಸಂಘದಲ್ಲಿ ಸದಸ್ಯರಾಗಿರುವ ರೈತರು ಮೃತಪಟ್ಟರೆ ಅವರಿಗೆ ₹ 2,500 ಮರಣೋತ್ತರ ನಿಧಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಪಿಕೆಪಿಎಸ್ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ತಾಲ್ಲೂಕಿನ ಕೋಟೆಕಲ್ ಗ್ರಾಮದ ಹೊಳೆಹುಚ್ಚೇಶ್ವರ ಸಂಸ್ಥಾನಮಠದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 74ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರೈತರಿಗೆ ನೀಡುವ ಕೃಷಿ ಸಾಲದ ಜೊತೆ ಅವರು ಬೆಳೆದ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಂಡು ಮುಂದೆ ಅವರಿಗೆ ಲಾಭದಾಯಕ ಬೆಲೆ ಸಿಗುವಂತ ಯೋಜನೆಗಳನ್ನು ಸಂಘವು ಹಾಕಿಕೊಂಡಿದೆ. ತೋಗುಣಶಿ ಹತ್ತಿರ ₹ 6.70 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಾಣ ಮಾಡಲಾಗಿದೆ. ಗುಳೇದಗುಡ್ಡದಲ್ಲಿ ₹ 97.17 ಲಕ್ಷ ವೆಚ್ಚದಲ್ಲಿ ವ್ಯಾಪಾರ ಮಳಿಗೆ ನಿರ್ಮಾಣ ಮಾಡಲಾಗಿದೆ. ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ 4,075 ಸದಸ್ಯರಿದ್ದಾರೆ. ₹ 3.32 ಕೋಟಿ ಷೇರು ಬಂಡವಾಳ, ₹ 28.89 ಕೋಟಿ ಠೇವುಗಳನ್ನು ಹೊಂದಿದೆ. ₹ 31.74 ಕೋಟಿಗಳನ್ನು ಸದಸ್ಯರಿಗೆ ಸಾಲ ನೀಡಲಾಗಿದೆ. ಸಂಘವು ಗ್ರಾಹಕರ ಮತ್ತು ಷೇರುದಾರರ ಸಹಕಾರದಿಂದ ಈ ವರ್ಷ ₹ 77.18 ಲಕ್ಷ ಲಾಭ ಗಳಿಸಿದೆ. ಗ್ರಾಹಕರಿಗೆ ಶೇ 12 ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ’ ಎಂದರು.
ಅಮರೇಶ್ವರ ಬ್ರಹನ್ಮಠದ ನೀಲಕಂಠ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಪ್ರಧಾನ ವ್ಯವಸ್ಥಾಪಕ ಚಂದ್ರಮೋಹನ ಕಲ್ಯಾಣಿ, ನಿರ್ದೇಶಕರಾದ ಯಲಗೂರದಪ್ಪ ತೊಗಲಂಗಿ, ಸಂಗಪ್ಪ ಹಡಪದ, ಮಾಗುಂಡಪ್ಪ ಸುಂಕದ, ನಾಗೇಶ ಮುರಗೋಡ, ಯಮನಪ್ಪ ರಾಠೋಡ, ದ್ಯಾಮಣ್ಣ ಗದ್ದನಕೇರಿ, ನಿರ್ಮಲಾ ಪ್ರಕಾಶ ಕಳ್ಳಿಗುಡ್ಡ, ಸಂತೋಷ ತಿಪ್ಪಾ, ಮಳಿಯಪ್ಪ ಹಾವಡಿ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.