
ಬಾದಾಮಿ: ಮೂರು ದಿನಗಳಿಂದ ಗಡ ಗಡ ನಡಗುವಂತೆ ಮಾಡಿದ ಚಳಿಗೆ ಜನರು ಹೊರಗೆ ಬಾರದಂತಾಗಿದೆ. ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಸೂರ್ಯ ಮುಳುಗಿದ ಕೂಡಲೇ ಸಂಜೆ ಚಳಿಯ ವಾತಾವರಣ ಜೋರಾಗುತ್ತಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಅಧಿಕ ಚಳಿಯಿಂದ ಜನರು ಮತ್ತು ಶಾಲೆಗೆ ತೆರಳುವ ಮಕ್ಕಳು ಪರದಾಡಿದರು. ನಸುಕಿನಲ್ಲಿ ಚಹಾ ಕುಡಿಯಲು ಅಂಗಡಿಗೆ ಬರುವ ಜನರು ಕಡಿಮೆಯಾಗಿದ್ದಾರೆ. ಹೊಲಕ್ಕೆ ಹೋಗುವ ರೈತರು ಕಾಣುತ್ತಿಲ್ಲ. ವಾಯು ವಿಹಾರಕ್ಕೆ ಹೋಗುವ ಜನರೂ ವಿರಳವಾಗಿದ್ದಾರೆ. ಚಳಿಗೆ ಹೆದರಿ ಜನರು ಹೊರಗೆ ಬರದಂತಾಗಿದೆ.
ವಾಯು ವಿಹಾರಕ್ಕೆ ಹೋಗುವವರು ತಲೆಗೆ ಉಣ್ಣೆ ಟೊಪ್ಪಿಗೆ, ಸ್ವೇಟರ್, ಕೈಗೆ ಗ್ಲೌಜ್ ಮತ್ತು ಮೂಗು,ಬಾಯಿಗೆ ಮಾಸ್ಕ್ ಹಾಕಿಕೊಂಡು ಹೋಗುವುದು ಕಂಡು ಬಂದಿತು. ನಸುಕಿನಲ್ಲಿ ಬೆಳಿಗ್ಗೆ 5 ಗಂಟೆಗೆ 12 ರಿಂದ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಬೆಳಿಗ್ಗೆ 9 ಗಂಟೆಯ ವರೆಗೂ ಜನರು ಹೊರಗೆ ಬರಲಿಲ್ಲ.
ಜ 3 ರಿಂದ ಬನಶಂಕರಿದೇವಿ ಜಾತ್ರೆ ಆರಂಭವಾಗುವುದು. ಇಡೀ ರಾತ್ರಿ ಮೂರು ಪ್ರಯೋಗ ನಾಟಕ ಪ್ರದರ್ಶನ ನಡೆಯುತ್ತವೆ. ಇದೇ ರೀತಿ ಚಳಿ ಬೀಸಿದರೆ ನಾಟಕ ವೀಕ್ಷಣೆಗೆ ಬರುವ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗಬಹುದು ಎಂದು ನಾಟಕ ಕಂಪನಿ ಮಾಲಿಕರಿಗೆ ದುಗುಡ ಉಂಟಾಗಿದೆ.
‘ಎರಡ್ಮೂರು ದಿನ ಆತ್ರಿ ತಂಡಿ ಬಯಂಕರ ಇರತ್ತ. ಎರಡು ಚಾದರ್ ಹೊತಗೊಂಡು ಮಲಕೊಂಡರೂ ತಂಡಿ ಬಿಡವಲ್ಲದು. ಈ ವರ್ಸ ತಂಡಿ ಬಾಳಾ ಐತಿ ತಂಡಿಗೆ ಹೆದರಿ ನಾನಂತೂ ಮುಂಜಾನೆ 8 ಕ್ಕ ಏಳತೀನ್ರಿ ’ ಎಂದು ಮಲ್ಲಿಕಾರ್ಜುನ ಹೇಳಿದರು.
ಮುಂಗಾರು ಮಳೆ ಅಧಿಕವಾಗಿ ಸುರಿದ ಹಿನ್ನೆಲೆಯಲ್ಲಿ ಈ ಬಾರಿ ಚಳಿ ಹೆಚ್ಚಿದೆ. ಆದರೆ ಚಳಿಯ ವಾತಾವರಣದಿಂದ ಹಿಂಗಾರು ಬೆಳೆ ಜೋಳ, ಕಡಲೆ, ಕುಸುಬಿ ಮತ್ತು ಹುರಳಿ ಬೆಳೆಗೆ ಅನುಕೂಲವಾಗಿದೆ ಎಂದು ರೈತರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.