ADVERTISEMENT

ಜಿಲ್ಲೆಯಲ್ಲಿ ಕೋವಿಡ್‌ಗೆ ಐವರು ಸಾವು

ನಾಲ್ವರಿಗೆ ಸಾವಿಗೀಡಾದ ನಂತರ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:29 IST
Last Updated 15 ಜುಲೈ 2020, 17:29 IST

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಇಬ್ಬರು ಸೇರಿದಂತೆ ಜಿಲ್ಲೆಯ ಐವರು ಕೋವಿಡ್‌ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ.

ಬಾಗಲಕೋಟೆಯ ಕಿಲ್ಲಾ ಪ್ರದೇಶದ 52 ವರ್ಷದ ಮಹಿಳೆಗೆ ಜುಲೈ 13ರಂದು ಮನೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದವರು. ನಂತರ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ್ದು, ಫಲಿತಾಂಶ ಪಾಸಿಟಿವ್ ಬಂದಿದೆ. ಜಮಖಂಡಿ ತಾಲ್ಲೂಕು ಆಲಗೂರು ಆರ್‌.ಸಿಯ 52 ವರ್ಷದ ವ್ಯಕ್ತಿ ಮನೆಯಲ್ಲಿಯೇ ಸಾವಿಗೀಡಾಗಿದ್ದರು. ಮರುದಿನ ಅವರಿಗೆ ಸೋಂಕು ದೃಢಪಟ್ಟಿದೆ.

ಜಮಖಂಡಿ ನಗರದ ವಿಠೋಬ ಗುಡಿ ಸಮೀಪದ ನಿವಾಸಿ 75 ವರ್ಷದ ವೃದ್ಧ ಜುಲೈ 12ರಂದು ಅನಾರೋಗ್ಯ ಕಾರಣ ಜಮಖಂಡಿ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಮರುದಿನ ಅವರು ಮೃತಪಟ್ಟಿದ್ದರು. ಅದೇ ದಿನ ಅವರಿಗೆ ಕೋವಿಡ್ ದೃಢಪಟ್ಟಿದೆ.

ADVERTISEMENT

ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿಯ 73 ವರ್ಷದ ವೃದ್ಧ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಮಂಗಳವಾರ ಮನೆಯಿಂದ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿಯೇ ಸಾವಿಗೀಡಾಗಿದ್ದಾರೆ. ನಂತರ ಅವರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಿದ್ದು, ಕೋವಿಡ್ ದೃಢಪಟ್ಟಿದೆ.

ಬಾಗಲಕೋಟೆಯ ವಿನಾಯಕ ನಗರದ 65 ವರ್ಷದ ನಿವೃತ್ತ ನೌಕರ ಬುಧವಾರ ಮೃತಪಟ್ಟಿದ್ದಾರೆ. ಜುಲೈ 11ರಂದು ಅನಾರೋಗ್ಯದ ಕಾರಣ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದ್ದು, ಅದೇ ದಿನ ಸೋಂಕು ದೃಢಪಟ್ಟಿತ್ತು. ಎಲ್ಲರ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಾವಳಿ ಅನ್ವಯ ಮಾಡಲಾಗಿದೆ. ಮೃತರ ಸಂಪರ್ಕ ಹೊಂದಿದ್ದವರು ಕೋವಿಡ್ ತಪಾಸಣೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.