ಬಾಗಲಕೋಟೆ: ಮುಧೋಳ ಸಮೀಪದ ಚಿಂಚಖಂಡಿ ಬಳಿಯ ಸೇತುವೆಯಿಂದ ಘಟಪ್ರಭಾ ನದಿಗೆ ಹಾರಿ ಭಾನುವಾರ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಕಮಕೇರಿಯ ಮೌನೇಶ ಕುಂಬಾರ (28 ಹಾಗೂ ಪತ್ನಿ ಮುಧೋಳ ತಾಲ್ಲೂಕಿನ ನಿಂಗಾಪುರದ ಅಕ್ಷತಾ (25) ಆತ್ಮಹತ್ಯೆ ಮಾಡಿಕೊಂಡವರು.
‘ಬೈಕ್ಮೇಲೆ ಬಂದ ದಂಪತಿ ಸೇತುವೆ ಮೇಲೆ ಅದನ್ನು ನಿಲ್ಲಿಸಿ ನದಿಗೆ ಜಿಗಿದಿದ್ದಾರೆ. ಸ್ಥಳದಲ್ಲಿಯೇ ದಂಪತಿಯ ಚಪ್ಪಲಿ ದೊರೆತಿವೆ. ಇಬ್ಬರೂ ಡೆತ್ನೋಟ್ ಬರೆದಿಟ್ಟಿದ್ದು, ತಮ್ಮ ಸಾವಿಗೆ ತಾವೇ ಕಾರಣ, ನಮ್ಮ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಿ ಎಂಬುದಾಗಿ ಬರೆದಿದ್ದಾರೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ತಿಳಿಸಿದರು.
ಮುಧೋಳ ತಾಲ್ಲೂಕಿನ ಮುದ್ದಾಪುರದ ಜೆ.ಕೆ.ಸಿಮೆಂಟ್ ಫ್ಯಾಕ್ಟರಿಯಲ್ಲಿ ಮೌನೇಶ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಅಕ್ಷತಾ ಜೊತೆ ಮದುವೆ ಆಗಿತ್ತು. ಕಾರ್ಖಾನೆಗೆ ಸಮೀಪ ಇದ್ದ ಕಾರಣ ನಿಂಗಾಪುರದಲ್ಲಿಯೇ ಮೌನೇಶ ದಂಪತಿ ನೆಲೆಸಿದ್ದರು. ಬೆಳಿಗ್ಗೆ ಫ್ಯಾಕ್ಟರಿಗೆ ಹೋಗುವುದಾಗಿ ಪತ್ನಿ ಮನೆಯವರಿಗೆ ತಿಳಿಸಿ ಅಲ್ಲಿಂದ ಬಂದು ಸ್ನೇಹಿತರನ್ನು ಭೇಟಿಯಾಗಿ ನಂತರ ಸೇತುವೆ ಬಳಿ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.