ಗುಳೇದಗುಡ್ಡ ತಾಲ್ಲೂಕಿನ ಖಾಜಿ ಬೂದಿಹಾಳ ಗ್ರಾಮದಲ್ಲಿ ಕೋರ್ಟ್ ಆದೇಶದಂತೆ ಭಾನುವಾರ ಕಾರ್ಯಾಚರಣೆ ಮೂಲಕ ದರಗಾ ತೆರವುಗೊಳಿಸಲಾಯಿತು
ಗುಳೇದಗುಡ್ಡ (ಬಾಗಲಕೋಟೆ ಜಿಲ್ಲೆ): ಅನಧಿಕೃತವಾಗಿ ನಿರ್ಮಿಸಿರುವ ದರ್ಗಾ ತೆರವುಗೊಳಿಸುವಂತೆ ಬೆಳಗಾವಿಯ ವಕ್ಫ್ ನ್ಯಾಯಮಂಡಳಿಯು ಜನವರಿಯಲ್ಲಿ ನೀಡಿದ್ದ ತೀರ್ಪು ಆಧರಿಸಿ ತಾಲ್ಲೂಕಿನ ಖಾಜಿ ಬೂದಿಹಾಳ ಗ್ರಾಮದಲ್ಲಿ ಎಂಟು ವರ್ಷಗಳ ಹಿಂದೆ ನಿರ್ಮಿಸಿದ್ದ ದರ್ಗಾವನ್ನು ಭಾನುವಾರ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಲಾಯಿತು.
‘ಅನಧಿಕೃತವಾಗಿ ದರ್ಗಾ ನಿರ್ಮಿಸಿ ಲಾಭದಾಯಕ ಚಟುವಟಿಕೆ ನಡೆಸಲಾಗುತ್ತಿದೆ’ ಎಂದು ಹುಸೇನ್ಸಾಬ ಸಯ್ಯದ್ಭಾಷಾ ಖಾಜಿ ಅವರು 2019 ರಲ್ಲಿ ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದರು. ಒಟ್ಟು 1.17 ಎಕರೆ ವಕ್ಫ್ ಜಮೀನಿನಲ್ಲಿ 20 ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಹಿರಿಯರೊಬ್ಬರ ಸಮಾಧಿ ನಿರ್ಮಿಸಲಾಗಿತ್ತು. ಇದೇ ಜಾಗದಲ್ಲಿ ಎಂಟು ವರ್ಷಗಳ ಹಿಂದೆ ಸಯ್ಯದ್ ಮುರ್ತುಜಾ ಖಾಜಿ ಎಂಬುವವರು ದರ್ಗಾ ನಿರ್ಮಿಸಿ, ಪ್ರತಿವರ್ಷ ಉರುಸು, ಗಂಧ ಕಾರ್ಯಕ್ರಮ ನಡೆಸುತ್ತಿದ್ದರು.
‘ತೆರವುಗೊಳಿಸುವ ಮುಂಚೆಯೇ ಪೊಲೀಸರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಯಿತು. ಎರಡು ಕಡೆಯವರ ಸಮ್ಮತಿ ಪಡೆದು ಕೋರ್ಟ್ ಆದೇಶದ ಕುರಿತು ತಿಳಿ ಹೇಳಿ ದರ್ಗಾ ತೆರವುಗೊಳಿಸಲಾಯಿತು’ ಎಂದು ಗುಳೇದಗುಡ್ಡ ಪೊಲೀಸ್ ಠಾಣೆ ಪಿಎಸ್ಐ ಸಿದ್ದಣ್ಣ ಯಡಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೋರ್ಟ್ ಆದೇಶದಂತೆ ಕ್ರಮ ಕೈಗೊಂಡು, ಕಾರ್ಯಾಚರಣೆ ಮೂಲಕ ದರ್ಗಾ ತೆರವುಗೊಳಿಸಲಾಗಿದೆ’ ಎಂದು ಬೆಳಗಾವಿ ಕೋರ್ಟ್ ಕಮಿಷನರ್ ಅಲ್ತಾಫ್ ಹುಸೇನ್ ಸಯ್ಯದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.