ADVERTISEMENT

9 ಗಂಟಲು ದ್ರವ ಮಾದರಿಯೂ ನೆಗೆಟಿವ್

ಜಿಲ್ಲೆಯಲ್ಲಿ 165 ಮಂದಿಯ ಮೇಲೆ ನಿಗಾ: ಲಾಠಿ ಪ್ರಹಾರ ಅಬಾಧಿತ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 16:18 IST
Last Updated 26 ಮಾರ್ಚ್ 2020, 16:18 IST
ಲಾಕ್‌ಡೌನ್‌ನಿಂದ ಗುರುವಾರ ಸ್ತಬ್ಧಗೊಂಡಿದ್ದ ಬಾಗಲಕೋಟೆ ನಗರದ ನೋಟಚಿತ್ರ: ಇಂದ್ರಕುಮಾರ ದಸ್ತೇನವರ
ಲಾಕ್‌ಡೌನ್‌ನಿಂದ ಗುರುವಾರ ಸ್ತಬ್ಧಗೊಂಡಿದ್ದ ಬಾಗಲಕೋಟೆ ನಗರದ ನೋಟಚಿತ್ರ: ಇಂದ್ರಕುಮಾರ ದಸ್ತೇನವರ   

ಬಾಗಲಕೋಟೆ: ಶಂಕಿತ ಕೋವಿಡ್ 19 ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದೆ. ಎಲ್ಲಾ 9 ಗಂಟಲು ದ್ರವ ಮಾದರಿಗಳು ನೆಗೆಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಆರ್.ರಾಜೇಂದ್ರ ತಿಳಿಸಿದ್ದಾರೆ.

ಈ ಮೊದಲು ಕಳುಹಿಸಿದ್ದ ಐದು ಮಾದರಿಗಳು ನೆಗೆಟಿವ್ ಬಂದಿದ್ದವು. ಹೊಸದಾಗಿ ನಾಲ್ಕು ಮಾದರಿಗಳನ್ನು ಬುಧವಾರ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.ಶುಕ್ರವಾರ ಎಲ್ಲವೂ ನೆಗೆಟಿವ್ ಫಲಿತಾಂಶ ಬಂದಿದೆ. ಎಲ್ಲರನ್ನೂ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.

ವಿದೇಶದಿಂದ ಮರಳಿದವರು ಸೇರಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 165 ಮಂದಿಯನ್ನು ಮನೆ ಹಾಗೂ ಆಸ್ಪತ್ರೆಯಲ್ಲಿ 14 ದಿನಗಳ ಕ್ವಾರೆಂಟೈನ್‌ನಲ್ಲಿ (ನಿಗಾ) ಇಡಲಾಗಿದೆ. ಅವರಲ್ಲಿ 55 ಮಂದಿ ನಿರೀಕ್ಷಣಾ ಅವಧಿ ಪೂರ್ಣಗೊಳಿಸಿದ್ದಾರೆ. ಆರೋಗ್ಯವಾಗಿದ್ದಾರೆ.

ADVERTISEMENT

ಲಾಠಿ ರುಚಿ!

ಸರ್ಕಾರದ ಆದೇಶದನ್ವಯ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದ್ದರೂ ಅನಗತ್ಯವಾಗಿ ಬೈಕ್ ನಲ್ಲಿ ಹೊರಗಡೆ ಓಡಾಡುತ್ತಿದ್ದವರಿಗೆ ಗುರುವಾರ ಕೂಡ ಪೊಲೀಸರು ಲಾಠಿ ರುಚಿ ತೋರಿಸಿದರು.

ದಿನಸಿ ಕೊಳ್ಳಲು ಅವಕಾಶ

ಮುಂಜಾನೆ ಕೆಲ ಹೊತ್ತು ಸಾರ್ವಜನಿಕರು ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ನಗರದ ಕಿರಾಣಿ ಅಂಗಡಿ ಹಾಗೂ ಸೂಪರ್‌ ಮಾರ್ಕೆಟ್‌ಗಳ ಎದುರು ಜನರು ಸಾಲುಗಟ್ಟಿದರು. ತರಕಾರಿ–ಹಣ್ಣಿನ ವ್ಯಾಪಾರವೂ ಜೊರಾಗಿ ನಡೆಯಿತು. ಅಂಗಡಿಗಳ ಮುಂದೆ ಹಾಕಲಾಗಿದ್ದ ಮಾರ್ಕಿಂಗ್‌ ಮೇಲೆ ನಿಂತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡರು. ಕೆಲವೆಡೆ ಅಂಗಡಿ ಮಾಲೀಕರು ಹಾಗೂ‍ಪೊಲೀಸರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ನಿಗದಿತ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.