ADVERTISEMENT

ಬಾಗಲಕೋಟೆ: ರಂಗೇರುತ್ತಿದೆ ಡಿಸಿಸಿ ಬ್ಯಾಂಕ್ ಚುನಾವಣೆ ಕಣ

ಆಕಾಂಕ್ಷಿಗಳ ಪೈಪೋಟಿ: ಘಟಾನುಘಟಿಗಳ ಕಣಕ್ಕಿಳಿಸಲು ರಾಜಕೀಯ ಪಕ್ಷಗಳ ಸಿದ್ಧತೆ

ವೆಂಕಟೇಶ ಜಿ.ಎಚ್.
Published 9 ಅಕ್ಟೋಬರ್ 2020, 20:30 IST
Last Updated 9 ಅಕ್ಟೋಬರ್ 2020, 20:30 IST
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಕಟ್ಟಡ
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಕಟ್ಟಡ   

ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ (ಬಿಡಿಸಿಸಿ) ನಿರ್ದೇಶಕ ಮಂಡಳಿಯ 13 ಸ್ಥಾನಗಳ ಚುನಾವಣೆಗೆ ಸಿದ್ಧತೆಗಳು ಗರಿಗೆದರಿವೆ.

ಡಿಸಿಸಿ ಬ್ಯಾಂಕ್‌ನಲ್ಲಿನ ಸ್ಥಾನಮಾನ ಪರೋಕ್ಷವಾಗಿ ಸಹಕಾರಿ ರಂಗದ ಮೂಲಕಗ್ರಾಮೀಣರೊಂದಿಗೆ ನೇರ ಸಂಪರ್ಕ ಸಾಧಿಸಲು ನೆರವಾಗುವ ಕಾರಣ ಸ್ಪರ್ಧಿಸಲು ಘಟಾನುಘಟಿಗಳು ಆಸಕ್ತಿ ತೋರಿದ್ದಾರೆ. ಹೀಗಾಗಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಜಿಲ್ಲೆಯಲ್ಲಿ 9 ತಾಲ್ಲೂಕುಗಳ ಪೈಕಿ ಎಂಟು ತಾಲ್ಲೂಕುಗಳಲ್ಲಿ (ಬಾಗಲಕೋಟೆ, ಹುನಗುಂದ, ಇಳಕಲ್, ಬಾದಾಮಿ, ಬೀಳಗಿ, ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಕ್ಷೇತ್ರಗಳಿಂದ (ಪಿಕೆಪಿಎಸ್) ತಲಾ ಒಬ್ಬರು, ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ, ಬ್ಯಾಂಕ್‌ಗೆ ಸಂಯೋಜಿತಗೊಂಡ ಎಲ್ಲ ಪಟ್ಟಣ ಸಹಕಾರಿ ಬ್ಯಾಂಕ್‌ಗಳು, ಬಿನ್‌ಶೇತ್ಕಿ ಸಹಕಾರಿ ಸಂಘಗಳಿಂದ ತಲಾ ಒಂದು, ಸಂಯೋಜಿತಗೊಂಡ ನೇಕಾರ ಸಂಘಗಳು, ಕುರಿ–ಉಣ್ಣೆ ಉತ್ಪಾದಕರ ನೇಕಾರ ಸಹಕಾರ ಸಂಘ ಸೇರಿದಂತೆ ಎಲ್ಲ ಸಹಕಾರಿ ಸಂಘಗಳಿಂದ ತಲಾ ಒಂದು ಸೇರಿ 13 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ADVERTISEMENT

ಜಿದ್ದಾಜಿದ್ದಿನ ಹೋರಾಟ: ಕಾಂಗ್ರೆಸ್ ಹಿಡಿತದಲ್ಲಿದ್ದ ಬಿಡಿಸಿಸಿ ಬ್ಯಾಂಕ್‌ನ ಆಡಳಿತವನ್ನು ಶತಾಯಗತಾಯ ಈ ಬಾರಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ. ಹೀಗಾಗಿ ಭರ್ಜರಿ ರಣತಂತ್ರ ರೂಪಿಸುತ್ತಿದೆ. ಜೆಡಿಎಸ್‌ನಿಂದ ಕಣಕ್ಕಿಳಿ
ಯುವ ಅಭ್ಯರ್ಥಿಗಳ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಆ ಪಕ್ಷದ ಮುಖಂಡ ಸಲೀಂ ಮೊಮಿನ್ ಹೇಳುತ್ತಾರೆ.

ಪಿಕೆಪಿಎಸ್‌ನಿಂದ ಬಿಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಅಜಯಕುಮಾರ ಸರನಾಯಕ (ಬಾಗಲಕೋಟೆ), ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ (ಬೀಳಗಿ), ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ (ಹುನಗುಂದ), ಕೆಪಿಸಿಸಿ ಮುಖಂಡ ಎಂ.ಎಲ್. ಶಾಂತಗಿರಿ (ಇಳಕಲ್),ರಬಕವಿ–ಬನಹಟ್ಟಿ ಪಿಕೆಪಿಎಸ್‌ನಿಂದ ಶಾಸಕ ಸಿದ್ದು ಸವದಿ, ಜಮಖಂಡಿಯಿಂದ ಸಿದ್ದು ಸವದಿ ಸಹೋದರ ಏಗಪ್ಪ, ರನ್ನ ಶುಗರ್ಸ್‌ನ ರಾಮಣ್ಣ ತಳೇವಾಡ (ಮುಧೋಳ) ಸ್ಪರ್ಧಿಸುತ್ತಿದ್ದಾರೆ. ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಕ್ಷೇತ್ರದಿಂದ ಹಾಲಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮರು ಆಯ್ಕೆ ಬಯಸಿದ್ದಾರೆ. ಅವರಿಗೆ ಪೈಪೋಟಿ ನೀಡಲು ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತರೆ ಸಹಕಾರಿ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಕುರಿ ಉಣ್ಣೆ ನೇಕಾರರ ಸಂಘದಿಂದ ಮಾಜಿ ಸಚಿವ ಎಚ್.ವೈ.ಮೇಟಿ, ನೇಕಾರ ಸೊಸೈಟಿಯಿಂದ ಡಾ.ಎಂ.ಎಸ್.ದಡ್ಡೇನವರ, ಬಿಜೆಪಿಯಿಂದ ಮಲ್ಲಿಕಾರ್ಜುನ ಬಾಣಕಾರ, ಟಿಎಪಿಸಿಎಂಸ್ ನಂದೂ ಪಾಟೀಲ ಅಥವಾ ಸುಭಾಷ್ ಮೆಳ್ಳಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.

ಬಾದಾಮಿ ಪಿಕೆಪಿಎಸ್‌ನಿಂದ ಕುಮಾರಗೌಡ ಜನಾಲಿ ಮರು ಆಯ್ಕೆ ಬಯಸಿದ್ದರೆ, ಜಮಖಂಡಿಯಲ್ಲಿ ಶ್ರೀಶೈಲಗೌಡ ದಳವಾಯಿ, ಐ.ಎಂ.ಮಗದುಮ್, ಹಾಲಿ ನಿರ್ದೇಶಕ ಮುಧೋಳದ ಕಾಶಿನಾಥ ಹುಡೇದ, ಬಾದಾಮಿಯಿಂದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ, ನೇಕಾರರ ಸೊಸೈಟಿಯಿಂದ ಕಮತಗಿಯ ಮುರುಗೇಶ ಕಡ್ಲಿಮಟ್ಟಿ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.