ADVERTISEMENT

‘ಭಕ್ತರ ಹಣ ದುಂದು ವೆಚ್ಚ ಬೇಡ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 12:49 IST
Last Updated 14 ಮಾರ್ಚ್ 2019, 12:49 IST
ಕೂಡಲಸಂಗಮದ ಶರಣ ಮೇಳದಲ್ಲಿ ಮಾತೆ ಮಹಾದೇವಿಯವರ ಪೀಠಾರೋಹಣದ ವಾರ್ಷಿಕೋತ್ಸವ ಸಂದರ್ಭ
ಕೂಡಲಸಂಗಮದ ಶರಣ ಮೇಳದಲ್ಲಿ ಮಾತೆ ಮಹಾದೇವಿಯವರ ಪೀಠಾರೋಹಣದ ವಾರ್ಷಿಕೋತ್ಸವ ಸಂದರ್ಭ   

ಕೂಡಲಸಂಗಮ: ಬಸವಧರ್ಮ ಪೀಠ ನಡೆಯುತ್ತಿರುವುದು ಭಕ್ತರ ದೇಣಿಗೆಯ ಹಣದಿಂದ. ಕೂಲಿಕಾರರು ಸೇರಿದಂತೆ ಸಮಾಜದ ಎಲ್ಲ ವರ್ಗದವರು ಬಸವಧರ್ಮ ಪೀಠಕ್ಕೆ ದೇಣಿಗೆ ಕೊಟ್ಟಿದ್ದಾರೆ. ಅವರು ಕೊಟ್ಟ ದೇಣಿಗೆ ಹಣ ಸಮರ್ಪಕವಾಗಿ ಬಳಕೆಯಾಗಬೇಕು.

ವೈಭವದ ಜೀವನ, ವಿಲಾಸಿ ಜೀವನ ನಡೆಸಲು ಅಲ್ಲ. ಪ್ರತಿಯೊಂದಕ್ಕೂ ಲೆಕ್ಕ ಇಡಬೇಕು ಎಂದು ಬಸವಧರ್ಮ ಪೀಠದ ಜಂಗಮ ಮೂರ್ತಿಗಳಿಗೆ ಹೇಳುತ್ತಾ ಬಂದಿರುವಬಸವಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಮಹಾದೇವಿ ಜೀವನದುದ್ದಕ್ಕೂ ನುಡಿದಂತೆ ನಡೆದವರು.

ಅನಾರೋಗ್ಯದ ಕಾರಣ ಎರಡು ವರ್ಷಗಳಿಂದ ಕೂಡಲಸಂಗಮದಲ್ಲಿಯೇ ವಾಸವಿದ್ದ ಮಾತೆ ಮಹಾದೇವಿ, ಕೆಲವು ಸಂದರ್ಭದಲ್ಲಿ ಬೆಂಗಳೂರಿನಿಂದ ಆಲಮಟ್ಟಿಗೆ ರೈಲಿನಲ್ಲಿ ಬಂದಾಗ, ಕೂಡಲಸಂಗಮಕ್ಕೆ ಬರಲು ವಾಹನ ವ್ಯವಸ್ಥೆ ಮಾಡುತ್ತೇವೆ ಎಂದರೂ ಒಪ್ಪುತ್ತಿರಲಿಲ್ಲ. ಮಹದೇಶ್ವರ
ಸ್ವಾಮೀಜಿ ಬಳಸುವ ಟೆಂಪೊ ಟ್ರ್ಯಾಕ್ಸ್‌ನಲ್ಲಿಯೇ ಬರುತ್ತಿದ್ದರು. ಕೆಲವು ಸಂದರ್ಭ ಅದೇ ವಾಹನವನ್ನು ಬಾಗಲಕೋಟೆ ಆಸ್ಪತ್ರೆಗೆ ಹೋಗಲು ಬಳಸುತ್ತಿದ್ದರು. ದುಂದು ವೆಚ್ಚ ಏಕೆ ಎಂಬುದು ಅವರ ಪ್ರಶ್ನೆಯಾಗಿತ್ತು.

ADVERTISEMENT

ಆನಾರೋಗ್ಯದ ನಡುವೆಯೇ ಅಧ್ಯಯನ, ಬರವಣಿಗೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಬೆಳಗಿನ ಜಾವ 2 ಗಂಟೆಗೆ ಎದ್ದು ನಿತ್ಯಕರ್ಮ ಮುಗಿಸಿ ನಸುಕಿನ 3ರಿಂದ 7ರವರೆಗೆ ಬರವಣಿಗೆಯಲ್ಲಿ ತೊಡಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು. ಮಧ್ಯಾಹ್ನ 3ರಿಂದ 6ರವರಗೆ ಅಧ್ಯಯನ ಮಾಡುತ್ತಿದ್ದರು. ಸಂಜೆ 7.30ರಿಂದ 8.30ರವರೆಗೆ ವಾಯುವಿಹಾರಕ್ಕೆ ಬಂದಾಗ ರಾಜಕೀಯ ವಿಷಯ ಬೇಡ, ಶರಣರ ತತ್ವ ಚಿಂತನೆ ಮಾಡಿ ಎಂದು ಸಲಹೆ ನೀಡುತ್ತಿದ್ದರು. ಯಾವುದೇ ವಿಷಯ ಕೇಳಿದರೂ ಸ್ಪಷ್ಟವಾಗಿ ಹೇಳುತ್ತಿದ್ದರು.

ಆರೋಗ್ಯ ಸರಿ ಇಲ್ಲ ಮಾತಾಜಿ, ಬೆಳಿಗ್ಗೆ ಬೇಗ ಏಳಬೇಡಿ ಎಂದು ವಿನಂತಿಸಿದರೂ; ‘ಸಿದ್ಧಗಂಗಾ ಶ್ರೀಗಳು ಬೆಳಿಗ್ಗೆ 3 ಗಂಟೆಗೆ ಏಳುತ್ತಿದ್ದರು. ಅವರು 110 ವರ್ಷ ಬದುಕಲಿಲ್ಲವೇ, ಕುಮಾರವ್ಯಾಸ ಮಹಾಭಾರತವನ್ನು ಬೆಳಗಿನ ಜಾವ
ದಲ್ಲಿಯೇ ಬರೆದದ್ದು. ನಸುಕಿನಲ್ಲಿ ಪ್ರಶಾಂತ ವಾತಾವರಣ ಇರುತ್ತೆ, ಉತ್ತಮ ಆಲೋಚನೆ ಮೂಡುತ್ತವೆ. ಹಾಗಾಗಿ ಬರೆಯುತ್ತೇನೆ. ಇದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಬರೆಯುವುದು ಬಹಳ ಇದೆ, ಇನ್ನೂ 30ಕ್ಕೂ ಅಧಿಕ ಪುಸಕ್ತ ಬರೆಯುವುದಿದೆ’ ಎನ್ನುತ್ತಿದ್ದರು.

ಡಾ.ಬಸವರಾಜ ಕೆರೂಡಿ ಸ್ಮರಣೆ: ಎರಡು ವರ್ಷಗಳಿಂದ ಮಾತಾಜಿ ವೈದ್ಯಕೀಯ ಚಿಕಿತ್ಸೆಯನ್ನು ಬಾಗಲಕೋಟೆಯ ಕೆರೂಡಿ
ಆಸ್ಪತ್ರೆಯಲ್ಲಿ ಪಡೆಯುತ್ತಿದ್ದರು. ಬೆಂಗಳೂರಿನಲ್ಲಿ ಇದ್ದಾಗ, ದೆಹಲಿಗೆ ತೆರಳಿದಾಗ ಡಾ.ಬಸವರಾಜ ಕೆರೂಡಿ ಅವರನ್ನು ಕೇಳಿಯೇ ಮುಂದುವರಿಯುತ್ತಿದ್ದರು.

‘ಬಹುತೇಕ ವೈದ್ಯರು ಭಯ ಪಡಿಸುತ್ತಾರೆ. ಆದರೆ ಬಸವರಾಜ ಕೆರೂಡಿ ನಮಗೆ ಬಹಳ ಆತ್ಮವಿಶ್ವಾಸ ತುಂಬಿದ್ದಾರೆ. ನಾನು ಮೊದಲು 20ರಿಂದ 30 ಮಾತ್ರೆ ತೆಗೆದುಕೊಳ್ಳುತ್ತಿದ್ದೆ. ಕೆರೂಡಿ ಅವರ ಚಿಕಿತ್ಸೆಯಿಂದ 3ರಿಂದ 4 ಮಾತ್ರೆಗೆ ಬಂದಿದ್ದೇನೆ. ಇಂತಹ ವೈದ್ಯರ ಪರಿಚಯ ಹಿಂದೆಯೇ ಆಗಿದ್ದರೆ ಆರೋಗ್ಯ ಇನ್ನೂ ಚೆನ್ನಾಗಿರುತ್ತಿತ್ತು. ಕೆರೂಡಿಯವರ ಋಣ ಹೇಗೆ ತೀರಿಸಬೇಕು, ಅವರು ನಮ್ಮ ಬಳಿ ಚಿಕಿತ್ಸೆಗೆ ಹಣ ಪಡೆಯುತ್ತಿಲ್ಲ’
ಎಂದು ನಿತ್ಯವೂ ಸ್ಮರಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.