ಇಳಕಲ್: ಸಮೀಪದ ಹಿರೇಓತಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲೆಗೆ ಗ್ರಾಮ ಪಂಚಾಯ್ತಿ ಒಂದು ತಿಂಗಳಿಂದ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ, ಊಟದ ತಟ್ಟೆ ಹಿಡಿದುಕೊಂಡು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರೌಢಶಾಲೆಗೆ ನೀರಿನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿಗೆ ಅನೇಕ ಸಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಶಾಲೆಯಲ್ಲಿ ಬಿಸಿಯೂಟದ ಸೇವಿಸಿದ ನಂತರ ದೂರದ ಬಸ್ ನಿಲ್ದಾಣ ಹತ್ತಿರದ ಸಾರ್ವಜನಿಕ ನಲ್ಲಿಗೆ ಬರಬೇಕಾಗಿದೆ. ಇದರಿಂದ ನಿತ್ಯವೂ ಒಂದು ಅವಧಿ ಹಾಳಾಗುತ್ತಿದೆ ಎಂದು ಅವಲತ್ತುಕೊಂಡರು.
ನೀರು ಕೇಳಿಕೊಂಡು ಗ್ರಾಮ ಪಂಚಾಯ್ತಿಗೆ ಬಂದರೆ ಇಲ್ಲಿ ಯಾವೊಬ್ಬ ಸಿಬ್ಭಂದಿಯೂ ಇಲ್ಲ. ನಾವು ಯಾರ ಮುಂದೆ ನಮ್ಮ ಸಮಸ್ಯೆ ಹೇಳಿಕೊಳ್ಳೊದು ಎಂದು ಪ್ರಶ್ನಿಸಿದರು.
ಎಸ್ಡಿಎಂಸಿ ಸದಸ್ಯರಾದ ಅಮರೇಶ ಗುಣಸಾಗರ, ಸಂಗಮೇಶ ರಗಟಿ ಮಾತನಾಡಿ, 'ಶಾಲೆಗೆ ಕುಡಿಯುವ ನೀರು ಒದಗಿಸುವುದು ಗ್ರಾಮ ಪಂಚಾಯ್ತಿ ಕರ್ತವ್ಯ. ಚುನಾಯಿತ ಸದಸ್ಯರು, ಅಧಿಕಾರಿಗಳು ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಬೇಕು' ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.