ADVERTISEMENT

ಬಾಗಲಕೋಟೆ:ಪ್ರವಾಹ ಬಂದಾಗಲಷ್ಟೇ ಸಂತ್ರಸ್ತರ ನೆನಪು; ನದಿ ತೀರದ ಜನರಿಗೆ ತಪ್ಪದ ಗೋಳು

ಬಸವರಾಜ ಹವಾಲ್ದಾರ
Published 29 ಜುಲೈ 2024, 4:40 IST
Last Updated 29 ಜುಲೈ 2024, 4:40 IST
ಜಮಖಂಡಿ ತಾಲ್ಲೂಕಿನ ಮುತ್ತೂರು ನಡುಗಡ್ಡೆಯ ಜನರು ಜಲಾವೃತಗೊಂಡ ರಸ್ತೆ ದಾಟಿದರು
ಜಮಖಂಡಿ ತಾಲ್ಲೂಕಿನ ಮುತ್ತೂರು ನಡುಗಡ್ಡೆಯ ಜನರು ಜಲಾವೃತಗೊಂಡ ರಸ್ತೆ ದಾಟಿದರು   

ಬಾಗಲಕೋಟೆ: ಜಿಲ್ಲೆಯಲ್ಲಿ ಆಗಾಗ ನದಿಗಳು ಉಕ್ಕಿ ಪ್ರವಾಹ ಬಂದಾಗ ನದಿ ತೀರದ ಸಂತ್ರಸ್ತರು ನೆನಪಾಗುತ್ತಾರೆ. ಎಲ್ಲರೂ ಅವರ ಸಂಕಷ್ಟ ಪರಿಹರಿಸುವ ಭರವಸೆ ನೀಡುತ್ತಾರೆ. ನಂತರ ದಿನಗಳಲ್ಲಿ ಸಂತ್ರಸ್ತರ ಗೋಳು ಕೇಳುವವರಿಲ್ಲ.

ಬಾಗಲಕೋಟೆ ಜಿಲ್ಲೆಯಲ್ಲಿ ನದಿಗಳ ಪ್ರವಾಹದಿಂದ ಕೆಲವರು ಸಂತ್ರಸ್ತರಾದರೆ, ಇನ್ನು ಕೆಲವರು ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ಮನೆ, ಹೊಲ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಇಬ್ಬರೂ ಸಂತ್ರಸ್ತರ ಸ್ಥಿತಿ ಚಿಂತಾಜನಕವಾಗಿದೆ.

ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಿಂದ 203 ಗ್ರಾಮಗಳು 2019ರಲ್ಲಿ ಪ್ರವಾಹಕ್ಕೆ ತುತ್ತಾಗಿದ್ದವು. ಅದರಲ್ಲಿ ಹಲವು ಗ್ರಾಮಗಳ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

ADVERTISEMENT

ಕೃಷ್ಣಾ ನದಿ ದಡದಲ್ಲಿರುವ 56, ಘಟಪ್ರಭಾದ 69 ಹಾಗೂ ಮಲಪ್ರಭಾ ದಡದಲ್ಲಿರುವ 63 ಗ್ರಾಮಗಳಿಗೆ ಪ್ರವಾಹ ಹೆಚ್ಚಾದಾಗ ನೀರು ನುಗ್ಗಬಹುದು ಎಂದು ಹಿಂದಿನ ಅನುಭವದ ಆಧಾರದ ಮೇಲೆ ಪಟ್ಟಿ ಮಾಡಲಾಗಿದೆ.

2019ರಲ್ಲಿ ಮೂರೂ ನದಿಗಳಲ್ಲಿ ಭಾರೀ ಪ್ರಮಾಣದ ಪ್ರವಾಹ ಬಂದಿತ್ತು. ಮಲಪ್ರಭಾ ನದಿ ಪ್ರವಾಹದಿಂದ ಮೊದಲ ಬಾರಿಗೆ ಬಾದಾಮಿ, ಹುನಗುಂದ ತಾಲ್ಲೂಕಿನ ಹಲವಾರು ಹಳ್ಳಿಗಳು ಮುಳುಗಡೆಯಾಗಿದ್ದವು. ಕಿಲೋ ಮೀಟರ್‌ಗಟ್ಟಲೇ ನೀರು ಹರಡಿಕೊಂಡಿತ್ತು. ನಂತರದ ಕೆಲವ ವರ್ಷಗಳಲ್ಲಿ ಪ್ರವಾಹ ಬಂದಿದೆಯಾದರೂ ಆ ಪ್ರಮಾಣದಲ್ಲಿಲ್ಲ.

ವಿವಿಧ ಉದ್ಯಮಿಗಳ ನೆರವಿನಿಂದ ಜಿಲ್ಲೆಯ 50 ಗ್ರಾಮಗಳನ್ನು ‘ಆಸರೆ’ ಯೋಜನೆ ಹೆಸರಿನಡಿ 12 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಕೆಲವು ಗ್ರಾಮಗಳಲ್ಲಿ ಜನರು ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಮನೆಗಳು ಪಾಳು ಬಿದ್ದಿವೆ. ಅವುಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಆಗಬೇಕಿದೆ.

ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಮುಧೋಳ ತಾಲ್ಲೂಕಿನ ಮಿರ್ಜಿ, ಜಮಖಂಡಿ ತಾಲ್ಲೂಕಿನ ತುಬಚಿ, ಟಕ್ಕಳಕಿ, ಮುತ್ತೂರು, ರಬಕವಿ–ಬನಹಟ್ಟಿ ತಾಲ್ಲೂಕಿನ ಹಳಿಂಗಳಿ, ನಂದಗಾಂವ ಗ್ರಾಮದಲ್ಲಿ 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪ್ರವಾಹ ಹೆಚ್ಚಾದರೆ, ಇವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಜಮಖಂಡಿ ತಾಲ್ಲೂಕಿನ ಮುತ್ತೂರು ನಡುಗಡ್ಡೆಯಲ್ಲಿ ಮನೆಗಳಿಗೆ ನೀರು  ನುಗ್ಗಿರುವುದು
ಬಹಳ ವರ್ಷಗಳ ಹಿಂದೆ ಮನೆಗಳಿಗೆ ಪರಿಹಾರ ನೀಡಲಾಗಿದೆ. ಆದರೆ ಹಕ್ಕುಪತ್ರಗಳನ್ನು ಕೂಡಲೇ ನೀಡಲಿಲ್ಲ. ಇದರಿಂದಾಗಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ನೀರು ಬಂದರೆ ಏನು ಮಾಡುವುದು?
ನಿಂಗನಗೌಡ ಪಾಟೀಲ ಸಂತ್ರಸ್ತ
ಸಂತ್ರಸ್ತರ ಸಂಕಷ್ಟಗಳಿಗೆ ಮುಕ್ತಿ ಯಾವಾಗ?
ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಅಣೆಕಟ್ಟಿನಲ್ಲಿ 40 ಗ್ರಾಮ ಆಲಮಟ್ಟಿ ಅಣೆಕಟ್ಟಿನಲ್ಲಿ 136 ಗ್ರಾಮಗಳು ಮುಳುಗಡೆಯಾಗಿವೆ. ಮೂರನೇ ಹಂತದಲ್ಲಿ 20 ಗ್ರಾಮಗಳು ಮುಳುಗಡೆಯಾಗುತ್ತಿವೆ. ಇಲ್ಲಿಯವರೆಗೆ 4.06 ಲಕ್ಷ ಎಕರೆ ಭೂಸ್ವಾಧೀನ 104404 ಕಟ್ಟಡಗಳ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬಾಧಿತವಾಗಿವೆ. ಹತ್ತಾರು ವರ್ಷಗಳ ಹಿಂದೆಯೇ ಮುಳುಗಡೆಯಾದರೂ ಜನರಿಗೆ ಹಕ್ಕುಪತ್ರಗಳು ಲಭಿಸಿಲ್ಲ. ಕಲಾದಗಿ ಗ್ರಾಮದ ಜನರು ಹತ್ತಾರು ವರ್ಷಗಳಿಂದ ಹಕ್ಕುಪತ್ರಗಳಿಗಾಗಿ ಅಲೆದಾಡುತ್ತಿದ್ದಾರೆ. 2019ರಲ್ಲಿ ಪ್ರವಾಹ ಬಂದಾಗ ಕಲಾದಗಿ ಅರ್ಧ ಗ್ರಾಮ ನೀರಿನೊಳಗೆ ಮುಳುಗಡೆಯಾಗಿತ್ತು. ಸರಿಯಾಗಿ ಅವರನ್ನು ಸ್ಥಳಾಂತರ ಮಾಡಿದ್ದರೆ ಅವರು ಸಂಕಷ್ಟ ಎದುರಿಸಬೇಕಾಗಿ ಬರುತ್ತಿರಲಿಲ್ಲ. ಹಲವಾರು ಕಡೆಗಳಲ್ಲಿ ಪುನರ್‌ವಸತಿ ಗ್ರಾಮಗಳನ್ನು ನಿರ್ಮಿಸಲಾಗಿದೆ. ಆದರೆ ವಿವಿಧ ಕಾರಣಗಳಿಗಾಗಿ ಜನರು ಅಲ್ಲಿಗೆ ಸ್ಥಳಾಂತರಗೊಂಡಿಲ್ಲ ಈ ಬಗ್ಗೆ ಅಧಿಕಾರಿಗಳೂ ತಲೆಕೆಡಿಸಿಕೊಂಡಿಲ್ಲ. ಜನರು ಸ್ಥಳಾಂತರಗೊಳ್ಳದ್ದರಿಂದ ಅಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನ ಪ್ರಾಥಮಿಕ ಪಶುಚಿಕಿತ್ಸಾಲಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಂಗನವಾಡಿ ಶಾಲಾ ಕಟ್ಟಡಗಳು ಪಾಳು ಬಿದ್ದಿವೆ. ಅವುಗಳಿಗೆ ಅಳವಡಿಸಲಾಗಿದ್ದ ಕಿಟಕಿ ಬಾಗಿಲು ಕಿತ್ತು ಹೋಗಿವೆ.
ಒತ್ತುವರಿ ತೆರವಿಗೆ ಬೇಕಿದೆ ಇಚ್ಛಾಶಕ್ತಿ
ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ ಘಟಪ್ರಭಾ ನದಿಗಳ ಪಾತ್ರ ಒತ್ತುವರಿ ಮಾಡಿರುವುದು ಸರ್ವೆಯಲ್ಲಿ ಬಯಲಾಗಿದೆ. ಒತ್ತುವರಿ ಪರಿಣಾಮ ನದಿಗಳು ಹರಿಯುವ ಮಾರ್ಗವನ್ನೇ ಬದಲಾಯಿಸಿಕೊಂಡು ಹೊಲ ಗ್ರಾಂಗಳಿಗೆ ನುಗ್ಗುತ್ತದೆ. ಮಲಪ್ರಭಾ ನದಿ ಹರಿಯುವ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಭೂ ದಾಖಲೆಗಳ ಇಲಾಖೆಯು ಸರ್ವೆ ಮಾಡಿದ್ದು 424 ಎಕರೆಯಷ್ಟು ನದಿ ಪ್ರದೇಶ ಒತ್ತುವರಿಯಾಗಿದೆ. ಘಟಪ್ರಭಾ ನದಿ ಒತ್ತುವರಿಯಾಗಿರುವ ಎರಡು ತಾಲ್ಲೂಕುಗಳಲ್ಲಿ ಸರ್ವೆ ಮಾಡಲಾಗಿದ್ದು 62 ಎಕರೆ ಒತ್ತುವರಿಯಾಗಿದೆ. ಕೆಲವು ಕಡೆಗಳಲ್ಲಿ ಒತ್ತುವರಿಯಿಂದಾಗಿ ನದಿಯು ಹಳ್ಳವಾದಂತಾಗಿವೆ. ಪ್ರವಾಹ: ನದಿಗಳ ಒತ್ತುವರಿಯಿಂದಾಗಿ ಆಗಾಗ ನದಿಗಳು ಆಗಾಗ ಉಕ್ಕಿ ಹರಿದು ಗ್ರಾಮಗಳಿಗೆ ನುಗ್ಗಲಾರಂಭಿಸಿವೆ. 2009 ಹಾಗೂ 2019ರಲ್ಲಿ ಪ್ರವಾಹ ಉಂಟಾದಾಗ ಮಲಪ್ರಭಾ ನದಿಯು 63 ಗ್ರಾಮಗಳಿಗೆ ಹಾಗೆಯೇ ಘಟಪ್ರಭಾ ನದಿಯು 69 ಗ್ರಾಮಗಳಿಗೆ ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿದ್ದವು. ಪ್ರವಾಹ ಬಂದಾಗ ಒತ್ತುವರಿ ತೆರವಿನ ಮಾತುಗಳು ಕೇಳಿ ಬರುತ್ತವೆ. ನಂತರದಲ್ಲಿ ಯಾರೂ ಗಮನ ಹರಿಸುವುದಿಲ್ಲ.
ಸ್ಥಳಾಂತರಕ್ಕೆ ಹಿಂದೇಟು
ಪ್ರವಾಹ ಬಂದಾಗ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಬಂದಾಗ ಜನರು ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಾರೆ. ಹಿಂದಿನ ವರ್ಷಗಳಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಹಾಗಾಗಿ ಸ್ಥಳಾಂತರಗೊಳ್ಳುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಸುರಕ್ಷಿತ ಸ್ಥಳಗಳಿಗೆ ಕಳುಹಿಸದೇ ಅನಾಹುತವಾದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ ನಂತರ ಈಡೇರಿಕೆಗೆ ಮುಂದಾಗುವುದಿಲ್ಲ.  ಮನೆಯಲ್ಲಿ ಸಾಮಾನುಗಳನ್ನು ತರಬಹುದಾದರೂ ಜಾನುವಾರುಗಳ ಸ್ಥಳಾಂತರ ಸರಳವಲ್ಲ. ಜೊತೆಗೆ ಅವುಗಳನ್ನು ಕಟ್ಟಲು ಜಾಗದ ತೊಂದರೆ ಮೇವಿನ ಕೊರತೆ ಎದುರಾಗುತ್ತದೆ. ಶಾಶ್ವತ ಪರಿಹಾರ ಕಲ್ಪಿಸಿದರೆ ಮಾತ್ರ ಸ್ಥಳಾಂತರಗೊಳ್ಳುವುದಾಗಿ ಜನರು ಪಟ್ಟು ಹಿಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.