ಜಮಖಂಡಿ: ತಾಲ್ಲೂಕಿನ ಆಲಗೂರ ಮಹಾವೀರ ಶಾಲಾ ವಾಹನ ಹಾಗೂ ಟ್ರ್ಯಾಕ್ಟರ್ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟ ಕವಟಗಿ ಗ್ರಾಮದ ನಾಲ್ವರು ವಿದ್ಯಾರ್ಥಿಗಳ ಕುಟುಂಬದವರಿಗೆ ತಲಾ ₹ 1 ಲಕ್ಷ, ಗಂಭೀರ ಗಾಯಗಳಾದ ನಾಲ್ವರಿಗೆ ತಲಾ ₹ 25 ಸಾವಿರವನ್ನು ವೈಯಕ್ತಿಕವಾಗಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ವಿಶೇಷ ಸಭೆ ಮಾಡಿ ಜಾಗೃತಿ ಮೂಡಿಸಬೇಕು. ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಸೂಚನೆ ನೀಡಬೇಕು. ಇದನ್ನು ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು’ ಎಂದು ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು.
ಶಾಲಾ ವಾಹನಗಳಲ್ಲಿ ಆಸನಗಳ ಅನುಸಾರವಾಗಿ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಭರ್ತಿಮಾಡಿಕೊಂಡು ಹೋದಲ್ಲಿ ಇಂತಹ ಅಪಘಾತಗಳು ನಡೆಯುವ ಸಾಧ್ಯತೆ ಇರುತ್ತವೆ. ಇದರ ಬಗ್ಗೆ ಶಾಲಾ ಮುಖ್ಯಸ್ಥರು, ಮುಖ್ಯಗುರುಗಳು ನಿಗಾ ವಹಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ ನಂಜೇಯ್ಯನಮಠ, ಮಾಜಿ ಶಾಸಕ ಆನಂದ ನ್ಯಾಮಗೌಡ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಹಶೀಲ್ದಾರ ಸಂತೋಷ ಮಕ್ಕೋಜಿ, ಅರುಣಕುಮಾರ ಶಹಾ, ರವಿ ಯಡಹಳ್ಳಿ, ಸಿದ್ದು ಮೀಸಿ, ದಾನೇಶ ಘಾಟಗೆ, ಈಶ್ವರ ವಾಳೆನ್ನವರ, ಬಸವರಾಜ ಹರಕಂಗಿ ರೋಹಿತ ಸೂರ್ಯವಂಶಿ, ಮಲ್ಲು ಶಿರಹಟ್ಟಿ ವಿ.ಪಿ ಬಾಗೇನ್ನವರ, ನರಸಿಂಹ ಕುಲ್ಲೋಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.