ಕೂಡಲಸಂಗಮ: ‘ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಜಿಟಿಟಿಸಿ ಕೋರ್ಸ್ ಉತ್ತಮ. ಇಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ದೊರೆಯುತ್ತದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಹೇಳಿದರು.
ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಶೈಕ್ಷಣಿಕ ವರ್ಷದ ತರಗತಿಗಳ ಆರಂಭ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ‘ಪ್ರಯೋಗಾತ್ಮಕ ಕಲಿಕೆಗರ ಇಲ್ಲಿ ಆದ್ಯತೆ ಇದ್ದು, ಗ್ರಾಮೀಣ ಭಾಗದಲ್ಲಿ ಇಂತಹ ತರಬೇತಿ ಕೇಂದ್ರಗಳು ಇರುವುದು ಹೆಮ್ಮೆಯ ಸಂಗತಿ. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಇಂತಹ ಕೋರ್ಸ್ ಅಧ್ಯಯನ ಮಾಡಿ ಸುಂದರ ಬದುಕು ಕಟ್ಟಿಕೊಳ್ಳಬೇಕು’ ಎಂದರು.
ಪ್ಲೇಸಮೆಂಟ್ ಅಧಿಕಾರಿ ಶಿವಕುಮಾರ ಎ.ಕೆ ಮಾತನಾಡಿ, ‘ಈ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಅಧಿಕ ಬೇಡಿಕೆ ಇದೆ. ಈ ವರ್ಷ ದೇಶದ ಎಂಟು ಪ್ರಮುಖ ಕಂಪನಿಗಳು ನಮ್ಮ ಕೇಂದ್ರಕ್ಕೆ ಬಂದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸುರೇಶ ರಾಠೋಡ ಮಾತನಾಡಿ, ‘ಪ್ರಸಕ್ತ ಸಾಲಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವರ್ಷ 230 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿದ್ದೇವೆ’ ಎಂದರು.
ಸಮಾರಂಭದಲ್ಲಿ ಶಿಕ್ಷಕ ಪ್ರಶಾಂತ ಪಟ್ಟದಕಲ್, ಉಪನ್ಯಾಸಕರಾದ ದೇವದಾಸ ನಾಯಕ, ಉದಯಕುಮಾರ ರಾಯಚೂರ, ವಿಶ್ವನಾಥ, ಶಿವಲೀಲಾ ಚೌಧರಿ, ಗಂಗಪ್ಪ, ರಾಜೇಶ್ವರಿ, ವೀರಣ್ಣ, ಮಹೇಶ ಹಳ್ಳೂರ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.